ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಡೆದ ಬೋರ್ಡ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಹಾಜರಾತಿ ಇರುವುದು ಕಾಶ್ಮೀರದ ಯುವಜನತೆಯ ಸಕಾರಾತ್ಮಕ ಮನೋಭಾವನೆಯನ್ನು ತೋರುತ್ತದೆ ಎಂದು ಪ್ರಧಾನಿ ನರೆಂದ್ರ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದ ಕೆಲವು ಗ್ರಾಮ ಪ್ರಧಾನರನ್ನು ಭೇಟಿ ಮಾಡಿ ಅಸ್ಥಿರ ವಾತಾವರಣ, ಶಾಲೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಗ್ರಾಮ ಪ್ರಧಾನರೊಂದಿಗೆ ನಡೆಸಿದ ಮಾತುಕತೆ ವೇಳೆ ಮಕ್ಕಳ ಭವಿಷ್ಯವನ್ನು ರೂಪಿಸುವ ಬಗ್ಗೆ ಗಮನ ಕೇಂದ್ರೀಕೃತಗೊಳಿಸಬೇಕೆಂದು ಸಲಹೆ ನೀಡಿರುವುದಾಗಿ ತಿಳಿಸಿರುವ ಪ್ರಧಾನಿ ಮೋದಿ, ಇತ್ತೀಚೆಗಷ್ಟೆ ನಡೆದ ಬೋರ್ಡ್ ಪರೀಕ್ಷೆಗಳಲ್ಲಿ ಶೇ.95 ರಷ್ಟು ಹಾಜರಾತಿ ಇರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯ ಹಾಜರಾತಿ ಕಾಶ್ಮೀರದ ಯುವಜನತೆಯ ಮನಸ್ಥಿತಿಯನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಜಮ್ಮು-ಕಾಶ್ಮೀರದ ಯುವಕರು ಜೀವನದಲ್ಲಿ ಎತ್ತರಕ್ಕೇರಬೇಕೆಂಬ ಆಶಯ ಹೊಂದಿದ್ದಾರೆ, ವಿದ್ಯಾರ್ಥಿಗಳ ಉತ್ಸಾಹವನ್ನು ಶ್ಲಾಘಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.