ನವದೆಹಲಿ: ಕೇಂದ್ರ ಸಚಿವ ಮಹೇಶ್ ಶರ್ಮಾ ಅವರ ಕುಟುಂಬದ ಮದುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗಮನ ಸೆಳೆದಿದ್ದು, ನೋಟುಗಳ ನಿಷೇಧ ನಂತರ ಮದುವೆಗೆ ಹಣ ಹೇಗೆ ಖರ್ಚು ಮಾಡುತ್ತಾರೆ ಎಂದು ತಿಳಿದುಕೊಳ್ಳಬೇಕೆಂದು ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದಾರೆ.
ಮೊದಲು ಸತ್ಯ ಹೇಳಿ ಎಂದು ಸಚಿವ ಶರ್ಮಾ ಅವರಿಗೆ ಟ್ವಿಟ್ಟರ್ ನಲ್ಲಿ ಅರವಿಂದ ಕೇಜ್ರಿವಾಲ್ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಸಂಸದ ಮಹೇಶ್ ಶರ್ಮಾ ತಮ್ಮ ಮಗಳ ಮದುವೆ ಮಾಡುತ್ತಿದ್ದಾರೆ. ಮದುವೆಗೆ ಚೆಕ್ ಮೂಲಕ ಪೇಮೆಂಟ್ ಮಾಡುತ್ತಾರೆಯೇ, ಇಲ್ಲ ಕೇವಲ ಎರಡೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ಮದುವೆ ಮುಗಿಸುತ್ತಾರೆಯೇ, ನೋಟುಗಳನ್ನು ಅವರು ಹೇಗೆ ವಿನಿಮಯ ಮಾಡಿಕೊಂಡರು ಎಂದು ಹಿಂದಿಯಲ್ಲಿ ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಹೇಶ್ ಶರ್ಮಾ, ಮೊದಲು ವಿಷಯವನ್ನು ಸರಿಯಾಗಿ ಹೇಳಿ, ಅದು ನನ್ನ ಮಗನ ಮದುವೆ, ಸಮಾರಂಭದ ಇಡೀ ಖರ್ಚು ವೆಚ್ಚಗಳನ್ನು ಬ್ಯಾಂಕಿನ ಮೂಲಕವೇ ನಡೆಸಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.