ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜ್ವಾಡ ವಿಲ್ಸನ್
ಹೈದರಾಬಾದ್: ಸ್ವಚ್ಛ ಭಾರತಕ್ಕಿಂತ ಸ್ವಚ್ಛ ಧಿಮಾಕ್ ಹೆಚ್ಚು ಮುಖ್ಯ ಎಂದು ರಮಣ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಮಲ ಹೊರುವ ಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿರುವ ಕಾರ್ಯಕರ್ತ ಬೆಜ್ವಾಡ ವಿಲ್ಸನ್ ಹೇಳಿದ್ದಾರೆ.
ಭಾರತದಲ್ಲಿ ಸಮಾನತೆಯನ್ನು ಸಾಧಿಸಬೇಕಾದರೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದರೆ ರಸ್ತೆಗಳನ್ನು ಸ್ವಚ್ಛಗೊಳಿಸುವುದಕ್ಕಿಂತ ಮುಖ್ಯ ಮನುಷ್ಯನ ಮನಸ್ಸನ್ನು ಸ್ವಚ್ಛಗೊಳಿಸುವುದು. ಇಂದು ಸ್ವಚ್ಛ ಭಾರತಕ್ಕಿಂತ ಸ್ವಚ್ಛ ಧಿಮಾಕು ಮುಖ್ಯವಾಗಿದೆ. ಮಲ ಹೊರುವವರ ಪುನರ್ವಸತಿಗೆ ಹಣವಿಲ್ಲದ ಸರ್ಕಾರ ಸ್ವಚ್ಛ ಭಾರತದ ಜಾಹಿರಾತಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ನಿನ್ನೆ ಹೈದರಾಬಾದಿನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಸಮಾಜ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದ ಸಮಾರಂಭದಲ್ಲಿ ಶುಚಿತ್ವದ ಕುರಿತು ಮಾತನಾಡಿದ ವಿಲ್ಸನ್, ಸ್ವಚ್ಛ ಭಾರತ ಕಾರ್ಯಕ್ರಮವನ್ನು ವಾಸ್ತವವಾಗಿ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದರ ಬದಲಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
''ರಾಜಕಾರಣಿಗಳು ಪೊರಕೆ ಹಿಡಿದುಕೊಂಡು ರಸ್ತೆಯನ್ನು 15 ನಿಮಿಷ ಸ್ವಚ್ಛಗೊಳಿಸಿ ಫೋಟೋ ತೆಗೆದುಕೊಂಡು ನಾವು ರಸ್ತೆ ಸ್ವಚ್ಛ ಮಾಡಿದ್ದೇವೆ ಎಂದು ಹೇಳಿ ಮನೆಗೆ ಹೊರಟು ಹೋಗುತ್ತಾರೆ. ರಾಜಕಾರಣಿಗಳು ಹೋದ ಮೇಲೆ ನಿಜವಾಗಿಯೂ ರಸ್ತೆ ಸ್ವಚ್ಛ ಮಾಡುವವರ ಬಗ್ಗೆ ಪ್ರಧಾನ ಮಂತ್ರಿಯವರು ಹೇಳುವುದಿಲ್ಲ. ಮಾನವನ ಬಹಿರ್ದೆಸೆಯನ್ನು ಸ್ವಚ್ಛ ಮಾಡುತ್ತಾ ಗ್ರಾಮ ಮತ್ತು ನಗರ ಪ್ರದೇಶಗಳನ್ನು ಸ್ವಚ್ಛಗೊಳಿಸುವಲ್ಲಿ 4 ಸಾವಿರ ವರ್ಷಗಳಿಂದ ನಿರತರಾಗಿರುವ ಮಲ ಹೊರುವವರು ತಮ್ಮ ಆತ್ಮ ಗೌರವ, ಮರ್ಯಾದೆಯನ್ನು ತ್ಯಾಗ ಮಾಡಿ ಕಾಯಕದಲ್ಲಿ ನಿರತರಾಗಿದ್ದಾರೆ'' ಎಂದರು.
ಇವರ ಸಿಟ್ಟಿಗೆ ಮುಖ್ಯ ಕಾರಣ ಮಲ ಹೊರುವವರ ಪುನರ್ವಸತಿಗೆ ಕೇಂದ್ರ ಸರ್ಕಾರ ಈ ವರ್ಷ ಬಜೆಟ್ ನಲ್ಲಿ ಶೇಕಡಾ 2ರಷ್ಟು ಕಡಿತಗೊಳಿಸಿ 510 ಕೋಟಿ ರೂಪಾಯಿ ಮೀಸಲಿಟ್ಟಿದೆ, ಅದೇ ಸ್ವಚ್ಛ ಭಾರತಕ್ಕೆ ಕೇಂದ್ರ ಸರ್ಕಾರ ಮೀಸಲಿಟ್ಟ ಹಣ 9 ಸಾವಿರ ಕೋಟಿ ರೂಪಾಯಿ.