ಶ್ರೀನಗರ: ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಂಟಾದ ಹಿಂಸಾಚಾರದಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೆ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಕಳೆದ ಮೂರು ತಿಂಗಳಲ್ಲಿ ದುಷ್ಕರ್ಮಿಗಳು ಕನಿಷ್ಠ 25 ಶಾಲೆಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ.
ನಿನ್ನೆ ಸಂಜೆ ದಕ್ಷಿಣ ಅನಂತ್ ನಾಗ್ ಜಿಲ್ಲೆಯ ಬಟ್ಗುಂದ್ ಎಂಬಲ್ಲಿ ಖಾಸಗಿ ಶಾಲೆಗೆ ಬೆಂಕಿ ಹಚ್ಚಿ ಧ್ವಂಸ ಮಾಡಲಾಗಿದೆ. ಜುಲೈ 9ರಿಂದ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ವ್ಯಾಪಕ ಹಿಂಸೆ, ಪ್ರತಿಭಟನೆ ಕಾರಣದಿಂದ ಮುಚ್ಚಿದ್ದು ಇದುವರೆಗೆ ತೆರೆದಿಲ್ಲ.
ಬೆಂಕಿ ಹಚ್ಚಲ್ಪಟ್ಟ 25 ಶಾಲೆಗಳಲ್ಲಿ 7 ಶಾಲೆಗಳು ದಕ್ಷಿಣ ಕಾಶ್ಮೀರದ ಕುಲ್ಗಾಮ ಜಿಲ್ಲೆಯಲ್ಲಿದ್ದು, ನಾಲ್ಕು ಬುಡ್ಗಾಮ್, ಮೂರು ಬರಮುಲ್ಲಾ ಮತ್ತು ತಲಾ ಎರಡು ಶಾಲೆಗಳು ಬಂಡಿಪೊರ, ಶೊಪಿಯಾನ್, ಗಂದೇರ್ಬಾಲ್ ಮತ್ತು ಅನಂತ್ ನಾಗ್ ಜಿಲ್ಲೆಗಳಲ್ಲಿ, ಒಂದೊಂದು ಶಾಲೆಗಳು ಪುಲ್ವಾಮ, ಕುಪ್ವಾರ ಮತ್ತು ಶ್ರೀನಗರ ಜಿಲ್ಲೆಗಳಲ್ಲಿವೆ.
ಶಾಲೆಗಳಿಗೆ ಬೆಂಕಿ ಹಚ್ಚಿರುವುದರಿಂದ ಅಲ್ಲಿ ಕಲಿಯುತ್ತಿರುವ 4 ಸಾವಿರದ 500ಕ್ಕೂ ಹೆಚ್ಚು ಮಕ್ಕಳ ಮೇಲೆ ಪರಿಣಾಮ ಬೀರಿದೆ.