ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೊರಗೆ ವ್ಯಕ್ತಿಯೊಬ್ಬ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲೆ ಇಂಕ್ ಎರಚಿದ್ದಾನೆ.
ಫಿನ್ ಲ್ಯಾಂಡ್ ಪ್ರವಾಸದಿಂದ ವಾಪಸ್ ಆಗಿರುವ ಮನೀಶ್ ಸಿಸೋಡಿಯಾ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ನಂತರ, ಗವರ್ನರ್ ಮನೆಯ ಮುಂಭಾಗ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಸಿಸೊಡಿಯಾ ಮೇಲೆ ಇಂಕ್ ಎರಚಿದ್ದಾನೆ.
ಇಂಕ್ ಎರಚಿದ ವ್ಯಕ್ತಿಯನ್ನು ದೆಹಲಿಯ ಕಾರವಾಲ್ ನಗರದ ನಿವಾಸಿ ಬ್ರಿಜೇಶ್ ಶುಕ್ಲಾ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ದೆಹಲಿಯಲ್ಲಿ ಚಿಕನ್ ಗುನ್ಯ ಹಾಗೂ ಡೆಂಗ್ಯೂ ತಾಂಡವವಾಡುತ್ತಿದ್ದರೂ ಆಪ್ ಸಚಿವರು ವಿದೇಶ ಪ್ರವಾಸಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಕೋಪಗೊಂಡ ವ್ಯಕ್ತಿ ಹೀಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.