ನವದೆಹಲಿ: ಬಡತನ ರೇಖೆಗಿಂತ ಕೆಳಗಿರುವವರಿಗೆ ಸಬ್ಸಿಡಿ ಆಧಾರದಲ್ಲಿ ಅಡುಗೆ ಅನಿಲ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ ವರ್ಷದೊಳಗೆ ದೇಶದಲ್ಲಿ 2 ಕೋಟಿ ಮೀರಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳ ಸಂಖ್ಯೆ 2 ಕೋಟಿಗೂ ಅಧಿಕವಾಗಿದ್ದು ತೀವ್ರ ಸಂತೋಷವನ್ನುಂಟುಮಾಡಿದೆ. ಬಡ ಕುಟುಂಬಗಳ ಹೆಂಗಸರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಉಜ್ವಲ ಯೋಜನೆ ದೃಢ ಬದ್ಧತೆಯನ್ನು ಹೊಂದಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಅವರು, ಉಜ್ವಲ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಧನ್ಯವಾದ ಹೇಳಿದರು. ಇದರ ಯಶಸ್ಸಿಗೆ ಹಗಲಿರುಳು ಶ್ರಮಿಸಿದವರನ್ನು ಅಭಿನಂದಿಸಿದರು.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಹತ್ವಾಕಾಂಕ್ಷಿ ಸಾಮಾಜಿಕ ಅಭಿವೃದ್ದಿ ಯೋಜನೆಯಾಗಿದ್ದು, ಇದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ವರ್ಷ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮೇ 1ರಂದು ಆರಂಭಿಸಿತ್ತು. ಸೌದೆಯಿಂದ ಒಲೆಯಲ್ಲಿ ಅಡುಗೆ ಮಾಡುವ ಸಂಕಷ್ಟದಿಂದ ಬಡ ಕುಟುಂಬಗಳ ಹೆಣ್ಣು ಮಕ್ಕಳನ್ನು ಪಾರು ಮಾಡಲು ಅವರಿಗೆ ಸಬ್ಸಿಡಿಯಲ್ಲಿ ಎಲ್ ಪಿಜಿ ಸೌಲಭ್ಯ ನೀಡುವುದಾಗಿದೆ. ಈ ಯೋಜನೆಯಡಿ 5 ಕೋಟಿ ಕುಟುಂಬಗಳಿಗೆ ಸಬ್ಸಿಡಿಸಹಿತ ಎಲ್ ಪಿಜಿ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.