ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಬಿಜೆಪಿ ಪಡೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದು, ಕಳೆದ ಲೋಕಸಭಾ ಚುನಾವಣೆಯಷ್ಟೇ ಫಲಿತಾಂಶದಿಂದ ತೃಪ್ತರಾಗದಂತೆ ಎಚ್ಚರಿಸಿದ್ದಾರೆ.
ಏ.6 ರಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ನವದೆಹಲಿಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ, ಪಕ್ಷವನ್ನು ರಾಜ್ಯಗಳಲ್ಲಿ ಹೆಚ್ಚು ಬಲಪಡಿಸುವಂತೆ ಸಂಸದರಿಗೆ ಸೂಚನೆ ನೀಡಿದ್ದಾರೆ. ಪಕ್ಷವನ್ನು ಸಂಘಟಿಸುವುದರೊಂದಿಗೆ ಕಳೆದ 3 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನೂ ಅಮಿತ್ ಶಾ ಸಂಸದರ ಹೆಗಲಿಗೇರಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಅಮಿತ್ ಶಾ ಬಿಜೆಪಿ ಸಂಸದರಿಗೆ ಒಂದಷ್ಟು ಯೋಜನೆಗಳನ್ನು ನೀಡಿದ್ದಾರೆ. ಇದೇ ವೇಳೆ ಕೇಂದ್ರ ಸಚಿವರಿಗೂ ಸಹ ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಲಾಗಿದ್ದು ಯಾವ್ಯಾವ ಸಚಿವರು ಎಲ್ಲೆಲ್ಲಿಗೆ ಹೋಗಿ ಪ್ರಚಾರ ಮಾಡಬೇಕೆಂಬ ಪಟ್ಟಿಯೂ ಈಗಾಗಲೇ ಸಿದ್ಧಗೊಂಡಿದ್ದು, 2019 ರ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿರುವುದು ಸ್ಪಷ್ಟವಾಗಿದೆ.