ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸಚಿವ ಸಿ.ವಿಜಯ ಭಾಸ್ಕರ್ 
ದೇಶ

ವೋಟಿಗಾಗಿ ನೋಟು ಆರೋಪ: ಚಿತ್ರ ನಟ ಶರತ್ ಕುಮಾರ್, ಸಚಿವ ಸಿ.ವಿಜಯ ಭಾಸ್ಕರ್ ಮನೆ ಮೇಲೆ ಐಟಿ ದಾಳಿ

ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ...

ಚೆನ್ನೈ: ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸರ್ಕಾರದ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಹಾಗೂ ಇತರ ಇಬ್ಬರ  ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಜೆ.ಜಯಲಲಿತಾ ನಿಧನದ ನಂತರ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೇ 12ರಂದು ಚುನಾವಣೆ ನಡೆಯಲಿದ್ದು ಈ ಸಂಬಂಧ ಮತದಾರರಿಗೆ ಹಣ ಹಂಚಿದ ಆರೋಪ ಕೇಳಿಬರುತ್ತಿದೆ.
ಚೆನ್ನೈಯಲ್ಲಿರುವ ನಟ ಶರತ್ ಕುಮಾರ್ ಮತ್ತು ವಿಜಯ ಭಾಸ್ಕರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ತಪಾಸಣೆ ನಡೆಸಿದರು. ಸಚಿವ ವಿಜಯ ಭಾಸ್ಕರ್ ಮತ್ತು ಅವರ ಸಹಚರರು ಹೊಂದಿರುವ ಆಸ್ತಿ ಸೇರಿದಂತೆ ಚೆನ್ನೈನ 34 ಕಡೆಗಳಲ್ಲಿ ಹಾಗೂ ತಮಿಳು ನಾಡಿನ ಇತರ 11 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಚೆನ್ನೈನ ಗ್ರೀನ್ ವೇ ರಸ್ತೆಯಲ್ಲಿರುವ ವಿಜಯ್ ಭಾಸ್ಕರ್ ಅವರ ನಿವಾಸ, ಅವರ ಹುಟ್ಟೂರಾದ ಪುದುಕೊಟ್ಟೈಯಲ್ಲಿ ರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಅವರಿಗೆ ಸೇರಿದ ಕಲ್ಲಿನ ಕ್ವಾರಿ ಮೇಲೂ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಇಲುಪ್ಪುರದಲ್ಲಿ ಸೌರಾಷ್ಟ್ರ ರಸ್ತೆಯಲ್ಲಿರುವ ಸಚಿವರ ಇನ್ನೊಂದು ಮನೆ ಮೇಲೂ ದಾಳಿಯಾಗಿದೆ.
ಆರ್ ಕೆ ನಗರ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರಿಗೆ ಹಣ ಹಂಚಿಕೆ ಮಾಡಿ ವಿಕೆ ಶಶಿಕಲಾ ಬಣಕ್ಕೆ ಮತ ಹಾಕಬೇಕೆಂದು ಕೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಈ ದಾಳಿ ನಡೆದಿದೆ.
ವಿಜಯ ಭಾಸ್ಕರ್ ಅವರು ಶಶಿಕಲಾ ಬಣಕ್ಕೆ ಸೇರಿದ್ದು, ನಟ ಶರತ್ ಕುಮಾರ್ ಅವರ ಎಐಎಸ್ಎಂಕೆ ಇತ್ತೀಚೆಗೆ ಶಶಿಕಲಾ ಅವರ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಗೆ ಬೆಂಬಲ ನೀಡಿದ್ದರು.
ಇವರೊಂದಿಗೆ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಗೀತಾ ಲಕ್ಷ್ಮಿ ಅವರ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.ಎಡಿಎಂಕೆಯ ರಾಜೇಂದ್ರನ್ ಅವರ ನಿವಾಸಕ್ಕೆ ಕೂಡ ಐಟಿ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಿದ್ದಾರೆ.
ಆದರೆ, ಈ ಆರೋಪಗಳನ್ನು ಎಐಎಡಿಎಂಕೆಯ ಉಪಾಧ್ಯಕ್ಷ ಹಾಗೂ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿಯಾದ ದಿನಕರನ್ ಅವರು ತಳ್ಳಿಹಾಕಿದ್ದಾರೆ. ಈ ಆರೋಪಗಳೆಲ್ಲವೂ ವಿರೋಧ ಪಕ್ಷವಾದ ಡಿಎಂಕೆ ಪಕ್ಷದ ಕುತಂತ್ರ ಎಂದು ಆರೋಪಿಸಿದೆ. 
ಮರಳು ಮಾಫಿಯಾ ದಂಧೆಯಲ್ಲಿ ಕೈವಾಡವಿರುವ ಆರೋಪ,  ಶಂಕೆಯ ಮೇಲೆ ಕೆಲ ತಿಂಗಳ ಹಿಂದೆ ತಮಿಳು ನಾಡು ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ರಾಮ ಮೋಹನ್ ರಾವ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. 
ಆಸಕ್ತಿಕರ ವಿಷಯವೆಂದರೆ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರಿಗೆ ನಿಕಟವರ್ತಿಗಳಾಗಿದ್ದ ಕೆಲವು ರಿಯಲ್ ಎಸ್ಟೇಟ್ ಘಟಕಗಳ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿದ ಮರುದಿನವೇ ಎಐಎಡಿಎಂಕೆಯ ಶಶಿಕಲಾ ಬಣದ ಸಚಿವರು ಮತ್ತು ಬೆಂಬಲಿಗರ ಮೇಲೆ ಐಟಿ ಇಲಾಖೆ ದಾಳಿ ನಡೆದಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

SCROLL FOR NEXT