ದೇಶ

ಹಣಕಾಸು ಅಕ್ರಮ ಪ್ರಕರಣ: ದೆಹಲಿಯ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಸಿಬಿಐ ತನಿಖೆ

Lingaraj Badiger
ನವದೆಹಲಿ: ಅಕ್ರಮ ಹಣಕಾಸು ವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ವಿರುದ್ಧ ಸಿಬಿಐ ಮಂಗಳವಾರ ಪ್ರಾಥಮಿಕ ತನಿಖೆ ಆರಂಭಿಸಿದೆ.
ಸತ್ಯೇಂದ್ರ ಜೈನ್ ಅವರು 2015–16ನೇ ಸಾಲಿನಲ್ಲಿ 4.6 ಕೋಟಿ ರುಪಾಯಿ ಅಕ್ರಮ ಹಣಕಾಸು ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿ ಸಿಬಿಐ ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದು,  ಈ ಸಂಬಂಧ ಸಚಿವರ ವಿರುದ್ಧ ಹಲವು ಸಾಕ್ಷ್ಯಗಳನ್ನು ಸಹ ಸಂಗ್ರಹಿಸಿದೆ.
ಸತ್ಯೇಂದ್ರ ಜೈನ್ ಅವರು ತಾವು ನಿರ್ದೇಶಕರಾಗಿದ್ದ ಶೆಲ್ ಕಂಪೆನಿಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆ. ಕೋಲ್ಕತ್ತದ ಜನರ ನೆರವು ಪಡೆದು ಶೆಲ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣಕಾಸು ಅಕ್ರಮ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಸತ್ಯೇಂದ್ರ ಜೈನ್ ಅವರು ಅಕ್ರಮ ವಹಿವಾಟಿನಿಂದ ಗಳಿಸಿದ ಲಾಭದಿಂದ ದೆಹಲಿಯಲ್ಲಿ 27.69 ಕೋಟಿ ರುಪಾಯಿ ಮೌಲ್ಯದ ಕೃಷಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪವಿದೆ.
ದೆಹಲಿ ಸಚಿವನ ಆರೋಪವನ್ನು ಆಮ್‌ ಆದ್ಮಿ ಪಕ್ಷ ಸ್ಪಷ್ಟವಾಗಿ ತಳ್ಳಿಹಾಕಿದ್ದು,2013ರಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸುವುದಕ್ಕೂ ಮೊದಲೇ ಶೆಲ್ ಕಂಪೆನಿಗಳ ನಿರ್ದೇಶಕರ ಹುದ್ದೆಗೆ ಜೈನ್ ಅವರು ರಾಜಿನಾಮೆ ನೀಡಿದ್ದರು. ಅಲ್ಲದೆ, ಕಂಪೆನಿಯಲ್ಲಿ ಅವರ ಹೂಡಿಕೆ 50 ಲಕ್ಷ ರುಪಾಯಿ ದಾಟಿರಲಿಲ್ಲ ಎಂದು ಆಪ್ ವಕ್ತಾರರು ಹೇಳಿದ್ದಾರೆ.
SCROLL FOR NEXT