ನವದೆಹಲಿ: ಮದುವೆ ಸಮಾರಂಭವೊಂದರಲ್ಲಿ ಗೋಮಾಂಸ ಪೂರೈಸದಕ್ಕಾಗಿ ನವ ವಿವಾಹಿತೆಗೆ ತಲಾಖ್ ನೀಡುವುದಾಗಿ ವರನ ಕುಟುಂಬದವರು ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ಕೇರಿ ಎಂಬಲ್ಲಿ ನಡೆದಿದೆ.
ನವ ವಿವಾಹಿತೆ ಯುವತಿಯನ್ನು ಅಫ್ಸಾನಾ ಎಂದು ಗುರುತಿಸಲಾಗಿದ್ದು, ಮದುವೆ ದಿನ ಆಕೆಯ ಮನೆಯವರು ಗೋಮಾಂಸ ನೀಡಿ ಆತಿಥ್ಯ ಮಾಡದ್ದಕ್ಕಾಗಿ ತಲಾಖ್ ನೀಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಅಫ್ಸಾನಾಳ ತಂದೆ ಸಲರಿ ಮದುವೆ ಬಳಿಕ ಆಕೆಯ ಮನೆಗೆ ಏನೋ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಗಳಿಗೆ ಗಂಡನ ಮನೆಯವರು ಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಗಂಡನ ಮನೆಯವರು ಆಕೆಗೆ ವಿಚ್ಛೇದನ ಕೊಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮದುವೆ ದಿನ ಗೋಮಾಂಸ ನೀಡಿಲ್ಲ ಎಂದು ಮತ್ತು ಕುಟುಂಬದವರಿಗೆ ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆದಿದ್ದಾರೆ.
ಮೊನ್ನೆ ಏಪ್ರಿಲ್ 22ರಂದು ಶಾಸ್ತ್ರೋಕ್ತವಾಗಿ ಅದ್ದೂರಿಯಾಗಿ ವಿವಾಹ ನೆರವೇರಿಸಿದ್ದೆವು. ವರದಕ್ಷಿಣೆ ಕೂಡ ನೀಡಿದ್ದೇವೆ. ವಿಚ್ಛೇದನ ಬೆದರಿಕೆಯಿಂದಾಗಿ ನಾವು ಬಹಳ ಆತಂಕಕ್ಕೀಡಾಗಿದ್ದೇವೆ ಎನ್ನುತ್ತಾರೆ ಸಲರಿ.
ಗಂಡನ ಮನೆಯವರ ಬೆದರಿಕೆ ನಂತರ ಸಲರಿ ಗ್ರಾಮದ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿದ್ದು ತಮ್ಮ ಮಗಳಿಗೆ ರಕ್ಷಣೆ ಒದಗಿಸಿ ಎಂದು ತಂದೆ ಕೇಳಿದ್ದಾರೆ. ಸ್ವತಃ ಅಫ್ಸಾನಾ ಬಹ್ರೈಚ್ ನ ಪೊಲೀಸ್ ಠಾಣೆಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ.
ಆದರೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ತಮಗೆ ರಕ್ಷಣೆ ಮತ್ತು ನ್ಯಾಯ ಒದಗಿಸಿ ಎಂದು ಅಫ್ಸಾನಾ ತನ್ನ ತಂದೆ ಮತ್ತು ಸೋದರ ನಸೀಮ್ ಜೊತೆ ಒಂದು ಪೊಲೀಸ್ ಠಾಣೆಯಿಂದ ಇನ್ನೊಂದು ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. ಇದೀಗ ಕೊನೆಯದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದಲಾದರೂ ನೆರವು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಈ ಯುವತಿ ಮತ್ತು ಆಕೆಯ ತಂದೆ, ಸೋದರರಿದ್ದಾರೆ.