ತಿರುವನಂತಪುರ: ಮಕ್ಕಳ ಜೀವನಕ್ಕೆ ಅಪಾಯಕಾರಿಯಾಗಿರುವ ರಷ್ಯಾ ಮೂಲದ ಬ್ಲೂ ವೇಲ್ ಅಂತರ್ಜಾಲ ಗೇಮ್ ಮೇಲೆ ಕೂಡಲೇ ನಿಷೇಧ ಹೇರುಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬ್ಲೂವೇಲ್ ಗೇಮ್ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿರುವ ಅವರು, ಪ್ರಾಣಕ್ಕೆ ಬೆದರಿಕೆಯೊಡ್ಡುವ ಈ ಆಟವು ನಮ್ಮ ಹೊಸ್ತಿಲಲ್ಲೇ ಇದೆ. ರಾಷ್ಟ್ರದಾದ್ಯಂತ ಅತ್ಯಮೂಲ್ಯವಾದ ಜೀವಗಳ ರಕ್ಷಣೆಗಾಗಿ ಬ್ಲೂವೇಲ್ ಆಟದ ಮೇಲೆ ನಿಷೇಧ ಹೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಹೇಳಿಕೊಂಡಿದ್ದಾರೆ.
ಇದೇನು ವಿಡಿಯೋ ಗೇಮ್ ಅಲ್ಲ. ಆದರೆ, ಅನಾಮಿಕ ವ್ಯಕ್ತಿಯಿಂದ ನಿರ್ದೇಶನ ಪಡೆಯುವ ಈ ಆಟವು ಕೊನೆಗೆ ಆತ್ಮಹತ್ಯೆಯಲ್ಲಿ ಅಂತ್ಯವಾಗುತ್ತದೆ. ಈ ಗೇಮ್ ನಿಂದಾಗಿ ಈಗಾಗಲೇ ರಾಷ್ಟ್ರದಲ್ಲಿ ಕೆಲವರು ಆತ್ಮಹತ್ಯೆಗೂ ಶರಣಾಗಿರುವ ಬಗ್ಗೆ ಮಾಧ್ಯಮ ವರದಿಗಳು ಬೆಳಕು ಚೆಲ್ಲಿವೆ ಎಂದು ತಿಳಿಸಿದ್ದಾರೆ. ಅಲ್ಲದೆ, ರಾಜ್ಯ ಪೊಲೀಸರು ಜಾಗೃತಿ ಮೂಡಿಸಲು ಯತ್ನ ನಡೆಸುತ್ತಿದೆ ಎಂದಿದ್ದಾರೆ.