ಮುಂಬೈ: ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಮುಸ್ಲಿಮರ ಪರವಾಗಿ ತೀರ್ಪು ನೀಡಿದರೂ ಭೂಮಿಯನ್ನು ಹಿಂದೂಗಳಿಗೆ ನೀಡುತ್ತೇವೆಂದು ಹಿರಿಯ ಶಿಯಾ ಮೌಲ್ವಿ ಭಾನುವಾರ ಹೇಳಿದ್ದಾರೆ.
ವಿಶ್ವ ಶಾಂತಿ ಮತ್ತು ಸಾಮರಸ್ಯ ಸಮಾವೇಶವನ್ನುದ್ದೇಶಿ ಮಾತನಾಡಿರುವ ಹಿರಿಯ ಶಿಯಾ ಮೌಲ್ವಿ ಮೌಲಾನಾ ಕಲ್ಬೆ ಸಾದಿಕ್ ಅವರು, ಬಾಬ್ರಿ ಮಸೀದಿ ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯದ ತೀರ್ಪಿನ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಒಂದು ವೇಳೆ ನ್ಯಾಯಾಲಯ ನಮ್ಮ ವಿರುದ್ಧವೇ ತೀರ್ಪು ನೀಡಿದರೂ ನ್ಯಾಯಾಲಯದ ಆದೇಶವನ್ನು ಶಾಂತಿಯುತವಾಗಿ ಒಪ್ಪಿಕೊಳ್ಳುತ್ತೇವೆಂದು ಹೇಳಿದ್ದಾರೆ.
ಒಂದು ವೇಳೆ ನಮ್ಮ ಪರವಾಗಿ ನ್ಯಾಯಾಲಯ ಆದೇಶ ನೀಡಿದರೂ ಸಂತೋಷದಿಂದ ಹಿಂದೂಗಳಿಗೆ ಭೂಮಿಯನ್ನು ನೀಡುತ್ತೇವೆ. ಈ ವಿಚಾರವನ್ನು ಎರಡೂ ಸಮುದಾಯಗಳು ಗೌರವಯುತವಾಗಿ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.