ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಖ್ ಅಬ್ದುಲ್ಲಾ
ನವದೆಹಲಿ: ಚೀನಾ, ಪಾಕಿಸ್ತಾನದಿಂದ ಭಾರತಕ್ಕೆ ಬೆದರಿಕೆಯಿಲ್ಲ, ದೇಶದೊಳಗಿರುವ ಆತಂಕವಾದಿಗಳಿಂದಲೇ ಭಾರತಕ್ಕೆ ಹೆಚ್ಚು ಬೆದರಿಕೆಯಿದೆ ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಖ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ಪರಂಪರೆ ರಕ್ಷಿಸಿ (ಸಂಝಿ ವಿರಸತ್ ಬಚಾವೋ) ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಭಾರತಕ್ಕೆ ಚೀನಾ ದೇಶದಿಂದಾಗಲೀ ಅಥವಾ ಪಾಕಿಸ್ತಾನ ರಾಷ್ಟ್ರದಿಂದಾಗೀ ಬೆದರಿಕೆಯಿಲ್ಲ. ಬದಲಿಗೆ ದೇಶದೊಳಕೆ ಕುಳಿತು ಅಧಿಕಾರ ನಡೆಸುತ್ತಿರುವ ಆತಂಕವಾದಿಗಳಿಂದ ಹೆಚ್ಚು ಬೆದರಿಕೆಯಿದೆ ಎಂದು ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರೂ ಕೂಡ ಹೋರಾಟ ಮಾಡಿದ್ದಾರೆ. ಭಾರತೀಯ ಮುಸ್ಲಿಮನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಈ ಹಿಂದೆ ನಾವು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದೆವು. ಇಂದು ನಮ್ಮ ಜನರೊಂದಿಗೆ ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ದೇಶದೊಳಗೆ ಕುಳಿತು ಆತಂಕ ಸೃಷ್ಟಿಸುತ್ತಿರುವವರು ರಾಷ್ಟ್ರದಲ್ಲಿರುತ್ತಾರೆ. ಆದರೆ, ಹೆಚ್ಚು ಉಳಿಯಲಾರರು. ಭಾರತವನ್ನು ಬ್ರಿಟೀಷರು ಹೇಗೆ ಬಿಟ್ಟು ತೊಲಗಿದರೋ ಹಾಗೆಯೇ ಅವರಿಗೂ ಪರಿಸ್ಥಿತಿ ಎದುರಾಗಲಿದೆ.
ನಿಮ್ಮನ್ನು ನೀವು ದೇವರೆಂದು ಪರಿಗಣಿಸಲು ಯತ್ನಿಸುತ್ತಿದ್ದೀರಾ? ಜನರು ಒಬ್ಬ ವ್ಯಕ್ತಿಯನ್ನು ದೇವರೆಂದು ಪರಿಗಣಿಸಲು ಆರಂಭಿಸಿದ್ದೇ ಆದರೆ, ಅಂದೇ ಆತನ ಅಂತಿಮ ದಿನಗಳು ಹತ್ತಿರವಾಗಲು ಆರಂಭಗೊಳ್ಳುತ್ತದೆ. ಭಾರತ ಪ್ರತೀಯೊಬ್ಬರಿಗೆ ಸೇರಿದ್ದು, ಆಡಳಿತಾರೂಢ ಸರ್ಕಾರ ಅದನ್ನು ಗೌರವಿಸಬೇಕು.
ಇಂದು ಕಾಶ್ಮೀರಿಗರನ್ನು ಪಾಕಿಸ್ತಾನಿಗಳೆಂದು ಕರೆಯಲಾಗುತ್ತಿದೆ. ಈ ರೀತಿಯ ಆಲೋಚನೆಗಳನ್ನು ನಿಮ್ಮ ತಲೆಯಿಂದ ತೆಗೆದುಹಾಕಿ ಎಂದು ಆ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ನಾವು ಪಾಕಿಸ್ತಾನದ ಪರವಾಗಿ ಹೋರಾಟ ಮಾಡುತ್ತಿಲ್ಲ. ಕಸಿದುಕೊಳ್ಳಲಾಗಿರವ ನಮ್ಮ ಹಕ್ಕಿನ್ನು ಮರು ಪಡೆದುಕೊಳ್ಳುವ ಸಲುವಾಗಿ ಭಾರತದಲ್ಲಿ ಹೋರಾಟ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ಇದೇ ವೇಳೆ 1947ರ ಪರಿಸ್ಥಿತಿ ಕುರಿತಂತೆ ಮಾತನಾಡಿರುವ ಅವರು, ಅಂದು ಕಾಶ್ಮೀರ ಸುಲಭವಾಗಿ ಪಾಕಿಸ್ತಾನದೊಂದಿಗೆ ಕೈಜೋಡಿಸಬಹುದಿತ್ತು. ಆದರೆ, ಕಾಶ್ಮೀರಿಗರು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. ನಮ್ಮ ತಂದೆ ಗಾಂಧೀಜಿಯವರೊಂದಿಗೆ ಕೈಜೋಡಿಸುವ ನಿರ್ಧಾರ ಕೈಗೊಂಡಿದ್ದರು. ತಂದೆಯವರ ನಿಯಮ ಹಾಗೂ ತತ್ತ್ವಗಳನ್ನೇ ನಾನು ಪಾಲನೆ ಮಾಡುತ್ತಿದ್ದೇನೆ. ಗಾಂಧೀಜಿಯವರ ದೇಶದೊಂದಿಗೆ ನಾನು ಕೈಜೋಡಿಸಿದ್ದೇನೆ. ನಾವು ಪಾಕಿಸ್ತಾನದ ಅಥವಾ ವಿದೇಶಿ ಮುಸ್ಲಿಮರಲ್ಲ. ನಾವು ಭಾರತೀಯ ಮುಸ್ಲಿಮರು. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಿ. ಈಗಾಗಲೇ ಒಂದು ಪಾಕಿಸ್ತಾನ ಸ್ಥಾಪನೆಗೊಂಡಿದೆ. ಇನ್ನು ಎಷ್ಟು ಪಾಕಿಸ್ತಾನ ಸೃಷ್ಟಿಸಲು ಹೊರಟಿದ್ದೀರಿ?
ಸರ್ಕಾರ ಇಂದು ಮಾಧ್ಯಮಗಳನ್ನು ಖರೀದಿ ಮಾಡಿಬಿಟ್ಟಿದೆ. ಒಂದು ಮಾಧ್ಯಮವಾದರೂ ಸರ್ಕಾರದ ವಿರುದ್ಧ ಏನನ್ನೂ ಬರೆಯುವುದಿಲ್ಲ. ಸರ್ಕಾರದ ವಿರುದ್ಧ ಜನರು ದನಿಯೆತ್ತುವ ದಿನಗಳು ದೂರವಿಲ್ಲ. ನನ್ನ ಪ್ರಮಾಣಿಕನಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಹೃದಯವಿಲ್ಲದ ಜನರು ನೀವು ಎಂಬುದೇ ಸತ್ಯ ಎಂದಿದ್ದಾರೆ.
ಇದೇ ವೇಳೆ ಕೇಂದ್ರದ ಎನ್'ಡಿಎ ಸರ್ಕಾರದ ವಿರುದ್ಧ ಕೈಜೋಡಿಸಿ ಜನತೆಯನ್ನು ದನಿಯನ್ನು ಒಗ್ಗೂಡಿಸುವ ಸಲುವಾಗಿ ಕಾರ್ಯಕ್ರಮಕ್ಕೆ ಹಾಜರಾಗಿರುವ ಎಲ್ಲಾ ವಿರೋಧ ಪಕ್ಷಗಳ ನಾಯಕರಿಗೆ ಅಭಿನಂದನೆಗಳನ್ನು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos