ದೇಶ

ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಸ್ವಾಗತಿಸಿದ ಟಿಟಿವಿ ದಿನಕರನ್

Lingaraj Badiger
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿರುವ ತಮಿಳುನಾಡು ಸರ್ಕಾರದ ನಿರ್ಧಾವನ್ನು ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಶುಕ್ರವಾರ ಸ್ವಾಗತಿಸಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರನ್ನು ಭೇಟಿ ಮಾಡಲು ದಿನಕರನ್ ಅವರು ಇಂದು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ಮ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ವಹಿಸಿರುವುದನ್ನು ಪಕ್ಷ ಸ್ವಾಗತಿಸುತ್ತದ ಎಂದಿದ್ದಾರೆ.
ತನಿಖೆಯ ನಂತರ ಜಯಲಿಲತಾ ಸಾವಿನ ಪ್ರಕರಣದಲ್ಲಿ ಶಶಿಕಲಾ ಆರೋಪ ಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ದಿನಕರನ್ ಅವರು, ಮತದಾರರನ್ನು ಓಲೈಸುವುದಕ್ಕಾಗಿ ಸಿಎಂ ಮತ್ತು ಇತರರು ಪೋಯಸ್ ಗಾರ್ಡನ್ ಅನ್ನು ಸ್ಮಾರಕವಾಗಿ ಪರಿವರ್ತಿಸುತ್ತಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಎಐಎಡಿಎಂಕೆಯ ಎರಡು ಬಣಗಳು ಮತ್ತೆ ವಿಲೀನವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನಕರನ್ ಅವರು, ವೈಯಕ್ತಿಕ ಲಾಭಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಆದರೆ ಪಕ್ಷದ ಶಾಸಕರು ಮಲಗಿರುವಂತೆ ನಟಿಸುತ್ತಿದ್ದು, ಅಗತ್ಯ ಬಿದ್ದಾಗ ನನ್ನ ಕಡೆ ಬರುತ್ತಾರೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೆ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು, ಜಯಲಲಿತಾ ಸಾವಿನ ಕುರಿತು ತನಿಖೆಗೆ ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಆಯೋಗ ರಚಿಸುವುದಾಗಿ ಹಾಗೂ ಅವರ ಪೊಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗುವುದು ಮತ್ತು ಸರ್ಕಾರವೇ ಅದನ್ನು ನಿರ್ವಹಣೆ ಮಾಡಲಿದೆ ಎಂದು ಘೋಷಿಸಿದ್ದರು.
SCROLL FOR NEXT