ರಾಯ್ಪುರ: ಬಿಜೆಪಿ ಸ್ಥಳೀಯ ಮುಖಂಡರೊಬ್ಬರು ನಿರ್ವಹಿಸುತ್ತಿರುವ ಸರ್ಕಾರಿ ಅನುದಾನಿತ ಗೋಶಾಲೆಯಲ್ಲಿ ಕಳೆದ ಮೂರು ದಿನಗಳಲ್ಲಿ 27 ಹಸುಗಳು ದುರಂತ ಸಾವಿಗೀಡಾಗಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಈ ಬಗ್ಗೆ ಬಿಜೆಪಿ ಮುಖಂಡ ಹರೀಶ್ ವರ್ಮಾ ವಿರುದ್ಧ ಛತ್ತೀಸ್ಗಢ ಗೋವು ಸೇವಾ ಆಯೋಗ ಪೊಲೀಸರಿಗೆ ಶುಕ್ರುವಾರ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ವರ್ಮಾ, ಗೋಶಾಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಸುಗಳು ಸೇರಿದ್ದವು. 220 ಸಾಮರ್ಥ್ಯ ಹೊಂದಿರುವ ಗೋಶಾಲೆಯಲ್ಲಿ 650ಕ್ಕೂ ಹೆಚ್ಚು ಹಸುಗಳಿದ್ದವು. ಈ ಬಗ್ಗೆ ಸರ್ಕಾರಕ್ಕೂ ಸಾಕಷ್ಟು ಬಾರಿ ಮಾಹಿತಿ ನೀಡಿದ್ದೇನೆ. ಹಸುಗಳಿಗೆ ಆಹಾರ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿರಲಿಲ್ಲ. ಸರ್ಕಾರ ಈ ವರೆಗೂ ರೂ, 10 ಲಕ್ಷ ಬಾಕಿ ಹಣವನ್ನು ನೀಡಬೇಕಿದೆ. ಆದರೆ, ಸರ್ಕಾರದಿಂದ ನನಗೆ ಈ ವರೆಗೂ ಹಣ ಬಂದಿಲ್ಲ. ಹಸುಗಳ ಸಾವಿಗೆ ನಾನು ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ.