ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿಕ್ಷೆಯ ಅವಧಿ ಮುಗಿಸಿದ 7 ಪಾಕಿಸ್ತಾನದ ಕೈದಿಗಳನ್ನು ಭಾರತ ಬಿಡುಗಡೆ ಮಾಡಿದ್ದು, ವಾಘಾ ಗಡಿ ಮೂಲಕ ಎಲ್ಲಾ ಕೈದಿಗಳು ತಮ್ಮ ತಾಯ್ನಾಡಿಗೆ ತೆರಳಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಪಾಕಿಸ್ತಾನ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ವಿಚಾರ ಹಾಗೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿರುವ ಮಧ್ಯೆಯೇ ಭಾರತ ಪಾಕಿಸ್ತಾನದ 7 ಕೈದಿಗಳನ್ನು ಬಿಡುಗಡೆ ಮಾಡಿದೆ.
ಪ್ರಸಕ್ತ ವರ್ಷದಲ್ಲಿ 295 ಮೀನುಗಾರರು ಸೇರಿದಂತೆ ಒಟ್ಟು 300 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಮಾನವೀಯತೆಯ ವಿಚಾರಗಳಿಗೆ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಶಿಕ್ಷೆಯ ಅವಧಿ ಮುಗಿಸಿದ 7 ಪಾಕಿಸ್ತಾನದ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 7 ಕೈದಿಗಳೂ ಪಾಕಿಸ್ತಾನ ಮೂಲದವರೇ ಎಂಬುದು ಖಚಿತವಾಗಿದ್ದು, ಅವರನ್ನು ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.