ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆ ಭಯೋತ್ಪಾದಕರ ಕೇಂದ್ರವಾಗಿ ನಿರ್ಮಾಣವಾಗುತ್ತಿದೆ ಎಂದು ರಕ್ಷಣಾ ತಜ್ಞರು ಭಾನುವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಪುಲ್ವಾಮದಲ್ಲಿ ದಾಳಿ ನಡೆಸಿದ್ದ ಉಗ್ರರು 8 ಯೋಧರನ್ನು ಬಲಿ ಪಡೆದುಕೊಂಡಿದ್ದರು. ಯೋಧರ ಅಗಲಿಕೆಗೆ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ಸಂತಾಪವನ್ನು ಸೂಚಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಪುಲ್ವಾಮ ಜಿಲ್ಲೆ ಭಯೋತ್ಪಾದಕರ ತಾಣವಾಗಿ ನಿರ್ಮಾಣವಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಪುಲ್ವಾಮದಲ್ಲಿ ನಡೆದಿರುವ ದೊಡ್ಡ ದಾಳಿ ಇದಾಗಿದೆ. ದಾಳಿಯಲ್ಲಿ ಹಲವಾರು ಯೋಧರು ಹುತಾತ್ಮರಾಗಿದ್ದಾರೆಂದು ಹೇಳಿದ್ದಾರೆ.
ಮತ್ತೊಬ್ಬ ರಕ್ಷಣಾ ತಜ್ಞ ಶಿವಾಲಿ ದೇಶಪಾಂಡೆ ಮಾತನಾಡಿ, 8 ಯೋಧರು ಹುತಾತ್ಮರಾಗಿರುವುದು ನಿಜಕ್ಕೂ ಬೇಸರವನ್ನು ತಂದಿದೆ. ಗಡಿಯಲ್ಲಿ ನಡೆಯುತ್ತಿರುವ ನುಸುಳಿವಿಕೆಯನ್ನು ಮೊದಲು ಮಟ್ಟ ಹಾಕಬೇಕು. ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ದಿಟ್ಟ ಉತ್ತರ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ. ಗುಪ್ತಚರ ಇಲಾಖೆ ಕೂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಉಗ್ರರು ಚಟುವಟಿಕೆಗಳನ್ನು ನಡೆಸುತ್ತಿರುವುದರ ಕುರಿತಂತೆ ನಮಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ.