ದೇಶ

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕಾರ

Srinivasamurthy VN

ನವದೆಹಲಿ: ಭಾರತದ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ದೀಪಕ್ ಮಿಶ್ರಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀಪಕ್ ಮಿಶ್ರಾ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೀಪಕ್ ಮಿಶ್ರಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಹಿಂದಿನ  ಮುಖ್ಯನ್ಯಾಯಮೂರ್ತಿಯಾಗಿದ್ದ ಜೆಎಸ್ ಖೆಹರ್ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ದೀಪಕ್ ಮಿಶ್ರಾ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿತ್ತು. 45ನೇ ಮುಖ್ಯನ್ಯಾಯಮೂರ್ತಿಯಾಗಿ  ಮಿಶ್ರಾ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಆ ಮೂಲಕ ಒಡಿಶಾ ರಾಜ್ಯದಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೂರನೇ ವ್ಯಕ್ತಿ ಎಂಬ ಕೀರ್ತಿಗೂ ದೀಪಕ್ ಮಿಶ್ರಾ ಅವರು ಪಾತ್ರರಾಗಿದ್ದಾರೆ. ಮಿಶ್ರಾ ಅವರ ಅಧಿಕಾರಾವಧಿ 2018 ರ  ಅಕ್ಟೋಬರ್ 18ವರೆಗೆ ಇರಲಿದೆ.

ಕಾವೇರಿ ಜಲ ವಿವಾದ, ಬಾಬ್ರಿ ಮಸೀದಿ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆಯನ್ನು ಮಿಶ್ರಾ ಅವರ ಅವಧಿಯಲ್ಲಿ ನಡೆಯಲಿವೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಿಶ್ರಾ ಅವರು 2011ರ  ಅಕ್ಟೋಬರ್‌ 10ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಕೊಂಡಿದ್ದರು. ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್‌ ಮೆನನ್‌ ಮತ್ತು ಫಿಸಿಯೋಥೆರಪಿಯೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ  ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ಮಿಶ್ರಾ ನೀಡಿದ್ದಾರೆ.

SCROLL FOR NEXT