ದೇಶ

ದೀರ್ಘಾವಧಿಯವರೆಗೆ ರಕ್ಷಣಾ ಸಚಿವನಾಗಿರುವುದಿಲ್ಲ ಎಂದು ಭಾವಿಸುತ್ತೇನೆ: ಅರುಣ್ ಜೇಟ್ಲಿ

Sumana Upadhyaya
ನವದೆಹಲಿ: ತಾವು ರಕ್ಷಣಾ ಸಚಿವ ಸ್ಥಾನ ಹುದ್ದೆಯಲ್ಲಿ ಇನ್ನು ಬಹಳ ಸಮಯದವರೆಗೆ ಇರಲಿಕ್ಕಿಲ್ಲ ಎಂದು ಅರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. 
ಅವರು ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವರ ಅವಧಿ ಬಗ್ಗೆ ಉತ್ತರಿಸುವಾಗ ಈ ಹುದ್ದೆಯಲ್ಲಿ ನಾನು ಬಹಳ ಸಮಯದವರೆಗೆ ಮುಂದುವರೆಯುವುದಿಲ್ಲ ಎಂದು ಭಾವಿಸುತ್ತೇನೆ. ಆದರೂ ಕೂಡ ಆ ಬಗ್ಗೆ ತೀರ್ಮಾನ ಮಾಡುವವನು ನಾನಲ್ಲ ಎಂದು ಪ್ರತಿಕ್ರಿಯಿಸಿದರು.
ಜಮ್ಮು-ಕಾಶ್ಮೀರ, ಛತ್ತೀಸ್ ಗಢ ಮೊದಲಾದ ರಾಜ್ಯಗಳಲ್ಲಿ ಭಯೋತ್ಪಾದಕರ ಕೃತ್ಯಗಳಿಗೆ ನಗದು ಅಮಾನ್ಯೀಕರಣ ಬಹುದೊಡ್ಡ ಬೆದರಿಕೆಯಾಗಿದೆ ಎಂಬ ತಮ್ಮ ಮಾತನ್ನು ಮತ್ತೊಮ್ಮೆ ಪುನರುಚ್ಛರಿಸಿದ ಅರುಣ್ ಜೇಟ್ಲಿ, ಕರೆನ್ಸಿಯ ಕೊರತೆಯಿಂದ ದೇಶದ ಪ್ರತ್ಯೇಕತಾವಾದಿಗಳಿಗೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸುವವರು ಸಿಗುವುದು ಕಡಿಮೆಯಾಗಿದೆ ಎಂದರು.
ಇದೇ ಮೊದಲ ಬಾರಿಗೆ ಆರ್ ಬಿಐ ಪ್ರತಿ ನೋಟನ್ನು ಸೂಕ್ಷ್ಮವಾಗಿ ಪರೀಕ್ಷಿಸಿದ್ದು, ನಕಲಿ ನೋಟು ಮತ್ತು ಅಸಲಿ ನೋಟುಗಳನ್ನು ಪ್ರತ್ಯೇಕಿಸಲು ಇದರಿಂದ ಸಹಾಯವಾಗಿದೆ.ನಗದು ಅಮಾನ್ಯೀಕರಣದಿಂದ ಭಯೋತ್ಪಾದಕರಿಗೆ ಕಷ್ಟವಾಗುತ್ತಿದೆ. ಅವರಿಗೆ ಅಷ್ಟೊಂದು ಬೆಂಬಲ, ಸಹಾಯ ಸಿಗುತ್ತಿಲ್ಲ ಎಂಬುದು ಇತ್ತೀಚೆಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಸಾಕಷ್ಟು ನೋಟುಗಳು ಚಲಾವಣೆಯಲ್ಲಿ ಇಲ್ಲದಿದ್ದರೆ ಕಲ್ಲು ತೂರಾಟ ನಡೆಸುವವರನ್ನು ಒಟ್ಟು ಸೇರಿಸಲು ಕಷ್ಟವಾಗುತ್ತದೆ ಎಂದು ಜೇಟ್ಲಿ ವಿವರಿಸಿದರು.
ಚುನಾವಣೆಗಳಲ್ಲಿ ಬಳಸುವ ಕಪ್ಪು ಹಣಕ್ಕೆ ಕೊನೆಕಾಣಿಸುವುದು  ಸರ್ಕಾರದ ಮುಂದಿನ ಹೆಜ್ಜೆಯಾಗಿದ್ದು, ಪ್ರಸ್ತಾವನೆಯ ಅಂತಿಮ ಹಂತದ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
SCROLL FOR NEXT