ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ನ ವಂಶಾಡಳಿತದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಆದರೆ ರಾಹುಲ್ ಗಾಂಧಿ ಪದೋನ್ನತಿಯನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಸಮರ್ಥನೆಗೆ ಯತ್ನಿಸಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಎಡವಟ್ಟು ಮಾಡಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಪದೋನ್ನತಿಯನ್ನು ಸಮರ್ಥಿಸುವ ಭರದಲ್ಲಿ ಮಣಿಶಂಕರ್ ಅಯ್ಯರ್ ಮೊಘಲರ ವಂಶಾಡಳಿತವನ್ನು ಉದಾಹರಣೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಪದೋನ್ನತಿ ಕುರಿತ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಮಣಿಶಂಕರ್ ಅಯ್ಯರ್, ಷಾ ಜಹಾನ್ ಜಹಂಗೀರ್ ಸ್ಥಾನಕ್ಕೆ ಬಂದಾಗ ಯಾವುದಾದರು ಚುನಾವಣೆ ನಡೆದಿತ್ತಾ? ಔರಂಗಜೇಬ್ ಷಾ ಜಹಾನ್ ಸ್ಥಾನಕ್ಕೆ ಬಂದಾಗ ಯಾವುದಾದರೂ ಚುನಾವಣೆ ನಡೆದಿತ್ತಾ? ಎಂದು ಪ್ರಶ್ನಿಸಿದ್ದಾರೆ. ರಾಜನ ಸಿಂಹಾಸನ ಅವರ ವಂಶದವರಿಗೇ ಸೇರಿದ್ದು ಎಂಬುದು ಎಲ್ಲರಿಗೂ ಗೊತ್ತಿದೆ ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯುತ್ತದೆ, ಪೂನಾವಾಲ ಅವರು ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಲು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಗುಜರಾತ್ ಚುನಾವಣೆ ಪ್ರಚಾರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದು, ಮಣಿ ಶಂಕರ್ ಅಯ್ಯರ್ ಒಂದು ಕುಟುಂಬಕ್ಕೆ ನಿಷ್ಠೆ ತೋರುವುದರಲ್ಲಿ ಹಿಂದೇಟು ಹಾಕುವುದಿಲ್ಲ, ಹಾಗಾಗಿಯೇ ಅವರು ರಾಹುಲ್ ಗಾಂಧಿ ಪದೋನ್ನತಿ ಬಗ್ಗೆ ಮಾತನಾಡುತ್ತಾ ಔರಂಗಜೇಬ್ ಷಾ ಜಹಾನ್ ಸ್ಥಾನಕ್ಕೆ ಬಂದಾಗ ಯಾವುದಾದರೂ ಚುನಾವಣೆ ನಡೆದಿತ್ತಾ? ಎಂದು ಪ್ರಶ್ನಿಸಿದ್ದಾರೆ, ಕಾಂಗ್ರೆಸ್ ಗೆ ಔರಂಗಜೇಬ್ ರಾಜ್ ಸಿಕ್ಕಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ನಮಗೆ 125 ಕೋಟಿ ಭಾರತೀಯರೇ ಹೈಕಮಾಂಡ್ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos