ನವದೆಹಲಿ: ಮಾಜಿ ಟೆಲೆಕಾಂ ಸಚಿವ ಎ ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಪ್ರಮುಖ ಆರೋಪಿಗಳಾಗಿರುವ 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ಕೋರ್ಟ್ ಡಿಸೆಂಬರ್ 21ಕ್ಕೆ ಕಾಯ್ದಿರಿಸಿದೆ.
ಪ್ರಕರಣದ ಸುದಿರ್ಘೀ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ ಪಿ ಸೈನಿ ಅವರು, ಅಂತಿಮ ತೀರ್ಪುನ್ನು ಡಿಸೆಂಬರ್ 21ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅಂದು 2ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ ಆರೋಪಿಗಳು ಖುದ್ದು ಹಾಜರಿರಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಎರಡು ಪ್ರತ್ಯೇಕ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದು, ಒಂದು ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದರೆ, ಮತ್ತೊಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ.
2ಜಿ ಸ್ಪೆಕ್ಟ್ರಂ ಹಗರಣ ಸಂಬಂಧ 2011ರಲ್ಲಿ ಎ.ರಾಜಾ, ಕನಿಮೋಳಿ ಹಾಗೂ ಇತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿತ್ತು. 2ಜಿ ಸ್ಪೆಕ್ಟ್ರಂಗಾಗಿ ನೀಡಿದ 122 ಲೈಸನ್ಸ್ ಗಳಿಂದ ಸರ್ಕಾರದ ಬೊಕ್ಕಸಕ್ಕೆ ಬರೊಬ್ಬರಿ 30,984 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಸಿಬಿಐ ತನ್ನ ಚಾರ್ಜ್ ಶೀಟ್ ನಲ್ಲಿ ಆರೋಪಿಸಿದೆ.
ಇನ್ನು 2014ರ ಏಪ್ರಿಲ್ ನಲ್ಲಿ ಅಕ್ರಮ ಹಣ ವಹಿವಾಟು ಸೇರಿದಂತೆ 2ಜಿ ಸ್ಪೆಕ್ಟ್ರಂ ಹಗರಣ ಸಂಬಂಧ ಎ.ರಾಜಾ, ಕನ್ನಿಮೋಳಿ ಸೇರಿದಂತೆ 19 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ್ದು, ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟುಮಾಡಿದ ಈ ಹಗರಣದ ಅಂತಿಮ ತೀರ್ಪುನ್ನು ಡಿಸೆಂಬರ್ 21ಕ್ಕೆ ನವದೆಹಲಿಯ ಪಟಿಯಾಲ ವಿಶೇಷ ನ್ಯಾಯಾಲಯ ಘೋಷಿಸಲಿದೆ.