ನವದೆಹಲಿ: ಗುಜರಾತ್ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ವಿರುದ್ಧ ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ.
ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಗುಜರಾತ್ ನ ಸೋಮನಾಥಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ್ದು, ರಾಜಕೀಯ ಪಕ್ಷಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಓಟು ಕೇಳುತ್ತಿದ್ದದ್ದು ನಮಗೆ ತಿಳಿದಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ಬಾಬಾ ಬೋಲೇನಾಥ್ ನ್ನು ಆರಾಧಿಸಲು ಪ್ರಾರಾಂಭಿಸಿದ್ದಾರೆ ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ.
ಅಂಬೇಡ್ಕರ್ ಅವರು ಕಂಡಿದ್ದ ಭಾರತದ ಕನಸಿನ ಮಾದರಿಯಾದ 2022ರ ವೇಳೆಗೆ ನವ ಭಾರತ ನಿರ್ಮಾಣದ ಕನಸನ್ನು ತಾವು ಹೊಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂಬೇಡ್ಕರ್ ಅವರು ಸರ್ವರಿಗೂ ಸಮಾನವಾದ ಅವಕಾಶ, ಸಮಾನ ಹಕ್ಕುಗಳು ಸಿಗಬೇಕೆಂಬ ಕನಸು ಹೊಂದಿದ್ದರು. ಜಾತಿವಾದದ ಸಂಕೋಲೆಗಳಿಂದ ಭಾರತ ಮುಕ್ತವಾಗಬೇಕೆಂಬುದು ಅಂಬೆಡ್ಕರ್ ಕನಸಾಗಿತ್ತು ಎಂದು ಮೋದಿ ಹೇಳಿದ್ದಾರೆ.