ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮತ್ತೆ ಶನಿವಾರ ತುರ್ತು ಭೂಸ್ಪರ್ಶ ಮಾಡಿದ ಘಟನೆ ಔರಂಗಬಾದ್ ನಲ್ಲಿ ನಡೆದಿದೆ.
ನಾಶಿಕ್ ನಿಂದ್ ಟೇಕ್ ಆಫ್ ಆಗಿದ್ದ ಮಹಾ ಸಿಎಂ ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಕೆಲವೇ ಕ್ಷಣಗಳಲ್ಲಿ ಓವರ್ಲೋಡ್ ನಿಂದಾಗಿ ಔರಂಗಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಓರ್ವ ಪ್ರಯಾಣಿಕನನ್ನು ಮತ್ತು ಲಗೇಜ್ ಅನ್ನು ಕಡಿಮೆ ಮಾಡಿದ ನಂತರ ಸಿಎಂ ಕ್ಯಾಪ್ಟರ್ ಪ್ರಯಾಣ ಮುಂದುವರೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಅಗತ್ಯವಾಗಿ ಹಾರಾಬೇಕಾದ ಎತ್ತರವನ್ನು ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಓರ್ವ ಪ್ರಯಾಣಿಕನನ್ನು ಕೆಳಗಿಳಿಸಿ ಸ್ವಲ್ಪ ಲಗೇಜ್ ಕಡಿಮೆ ಮಾಡಲಾಗಿದೆ. ಇದೇನು ದೊಡ್ಡ ವಿಚಾರ ಅಲ್ಲ. ಸಿಎಂ ಅದೇ ಹೆಲಿಕಾಪ್ಟರ್ ನಲ್ಲಿ ತಮ್ಮ ಪ್ರಯಾಣ ಮುಂದುವರೆಸಿದ್ದು, ನಿಗದಿಯಂತೆ ಔರಂಗಬಾದ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆಯೇ ದೇವೇಂದ್ರ ಫಡ್ನವಿಸ್ ಅವರ ಹೆಲಿಕಾಪ್ಟರ್ ಲಾತೂರ್ ಬಳಿ ತುರ್ತು ಭೂಸ್ಪರ್ಶ ಮಾಡಿತ್ತು. ಅದೃಷ್ಟ ವಶಾತ್ ಹೆಲಿಕಾಪ್ಟರ್ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದರು.
ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಫಡ್ನವಿಸ್ಲಾತೂರ್ಗೆ ತೆರಳುತ್ತಿದ್ದರು. ಕಾರ್ಯಕ್ರಮ ಮುಗಿದ ನಂತರ ಲಾತೂರ್ನ ನಿಲಂಗಾ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿತ್ತು.
ಹೆಲಿಕಾಪ್ಟರ್ ಟೇಕ್ ಆಫ್ ಆದ ತಕ್ಷಣ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ಪೈಲೆಟ್ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದರು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ವೈರ್ಗಳ ನಡುವೆ ಸಿಲುಕಿದ ಕಾರಣ ಕಾಪ್ಟರ್ಗೆ ಸ್ವಲ್ಪ ಪ್ರಮಾಣದ ಹಾನಿಯಾಗಿತ್ತು.