ನವದೆಹಲಿ: ಈ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನಿರ್ದಿಷ್ಟ ಉದ್ಯಮಿಗಳಿಗೆ ಕೋಟ್ಯಂತರ ಸಾಲ ನೀಡಲು ಬ್ಯಾಂಕ್ ಗಳ ಮೇಲೆ ಒತ್ತಡ ಹೇರಲಾಗಿತ್ತು, ಇದು 2 ಜಿ, ಕಲ್ಲಿದ್ದಲು, ಕಾಮನ್ ವೆಲ್ತ್ ಹಗರಣಕ್ಕಿಂತಲೂ ದೊಡ್ಡ ಹಗರಣ ಎಂದು ಮೋದಿ ಆರೋಪಿಸಿದ್ದಾರೆ.
ಇಂಡಸ್ಟ್ರಿ ಅಸೋಸಿಯೇಷನ್ ಎಫ್ಐಸಿಸಿಐ ನ 90 ನೇ ಎಜಿಎಂ ನಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನಾನ್ ಪರ್ಫಾರ್ಮಿಂಗ್ ಅಸೆಟ್(ಎನ್ ಪಿಎ) ಅಥವಾ ಬ್ಯಾಡ್ ಲೋನ್ ಗಳ ಸಮಸ್ಯೆ ಈ ಹಿಂದಿನ ಆಡಳಿತಾವಧಿಯಲ್ಲಿದ್ದ ಅರ್ಥಶಾಸ್ತ್ರಜ್ಞರ ಬಳುವಳಿ ಎಂದು ಹೇಳಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ ನಿರ್ದಿಷ್ಟ ಕೈಗಾರಿಕೋದ್ಯಮಿಗಳಿಗೆ ಸಾಲ ನೀಡುವುದಕ್ಕೆ ಬ್ಯಾಂಕ್ ಗಳ ಮೇಲೆ ಒತ್ತಡವಿತ್ತು, ಇದು ಸಾರ್ವಜನಿಕರ ಹಣದ ಲೂಟಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಬ್ಯಾಂಕ್ ಗಳಲ್ಲಿರುವ ಠೇವಣಿಗಳು ಸುರಕ್ಷಿತವಾಗಿರುತ್ತವೆ ಎಂದು ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಪ್ರಸ್ತಾವಿತ ಎಫ್ಆರ್ ಡಿಐ ಬಿಲ್ ನ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಸರ್ಕಾರ ಬ್ಯಾಂಕ್ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಯತ್ನಿಸುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎಫ್ ಆರ್ ಡಿಐ ಬಿಲ್ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗುತ್ತಿದ್ದು, ಮಸೂದೆಯಲ್ಲಿರುವ ಅಂಶಗಳಿಗೆ ತದ್ವಿರುದ್ಧವಾದದ್ದನ್ನೇ ಹಬ್ಬಿಸಲಾಗುತ್ತಿದೆ. ಬ್ಯಾಂಕ್ ಗಳು ಹಾಗೂ ಅದರಲ್ಲಿರುವ ಠೇವಣಿಗಳನ್ನು ಸುರಕ್ಷಿತವಾಗಿರಿಸಲು ನಾವು ಯತ್ನಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದು ಬ್ಯಾಂಕ್ ಗಳಲ್ಲಿರುವ ಠೇವಣಿಗಳು ಸುರಕ್ಷಿತವಾಗಿರುತ್ತವೆ ಎಂದು ಭರವಸೆ ನೀಡಿದ್ದಾರೆ.