ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ತವರು ಕ್ಷೇತ್ರ ಆರ್ ಕೆ ನಗರದಲ್ಲಿ ಆಯೋಜನೆಯಾಗಿರುವ ಉಪ ಚುನಾವಣೆಯಲ್ಲಿ ಚುನಾವಣಾ ಅಕ್ರಮ ಮುಂದುವರೆದಿದ್ದು, ಶನಿವಾರ ನಡೆದ ದಾಳಿಯಲ್ಲಿ ಮತದಾರರಿಗೆ ಹಂಚಲು ತಂದಿದ್ದ ಸುಮಾರು 12 ಲಕ್ಷ ರು.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದೇ ಡಿಸೆಂಬರ್ 21ರಂದು ಆರ್ ಕೆನಗರ ಉಪಚುನಾವಣೆಯ ಮತದಾನ ನಡೆಯಲಿದ್ದು, ಆಡಳಿತಾ ರೂಢ ಎಐಎಡಿಎಂಕೆ ಹಾಗೂ ಶಶಿಕಲಾ ಬಣದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಶತಾಯಗತಯಾ ಈ ಸ್ಥಾನವನ್ನು ಗೆಲ್ಲಲ್ಲೇ ಬೇಕು ಎಂದು ರಾಜಕೀಯ ಪಕ್ಷಗಳು ಪಣ ತೊಟ್ಟಿದ್ದು, ಇದೇ ಕಾರಣಕ್ಕೆ ಮತದಾರರಿಗೆ ವ್ಯಾಪಕ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಏಪ್ರಿಲ್ ನಲ್ಲೂ ಚುನಾವಣಾ ಆಯೋಗ ಮತದಾನವನ್ನು ರದ್ದುಗೊಳಿಸಿ ಮುಂದೂಡಿತ್ತು.
ಇದೀಗ ಮತ್ತೆ ಆರ್ ಕೆನಗರದಲ್ಲಿ ವ್ಯಾಪಕ ಚುನಾವಣಾ ಅಕ್ರಮಗಳ ನಡೆಯುತ್ತಿದ್ದು, ನಿನ್ನೆ ಎರಡನೇ ಬಾರಿಗೆ ಆಯೋಗ ಅಧಿಕಾರಿಗಳು ಮತದಾರರಿಗೆ ಹಂಚಲು ತಂದಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆರ್ ಕೆನಗರದ ಶಾಸಕಿಯಾಗಿದ್ದ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಸಾವಿನ ಬಳಿಕ ಈ ಸ್ಥಾನ ತೆರವಾಗಿತ್ತು. ಇದೀಗ ಈ ಸ್ಥಾನಕ್ಕಾಗಿ ತಮಿಳುನಾಡಿನ ರಾಜಕೀಯ ಘಟಾನುಘಟಿ ನಾಯಕರೇ ಸ್ಪರ್ಧಿಸುತ್ತಿದ್ದಾರೆ.