ಚಂಡೀಘಡ: ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ದಾಳಿಗೆ ಬಲಿಯಾದ ಹುತಾತ್ಮ ಯೋಧ ಪರ್ಗತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರು ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಮ್ಮ ಮಗ ಹಾಗೂ ಇತರ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಪಾಕಿಸ್ತಾನಿ ಸೈನಿಕರಿಗೆ ತಕ್ಕ ಪಾಠ ಕಲಿಸುವಂತೆ ಮೃತ ಯೋಧ ಪರ್ಗತ್ ಸಿಂಗ್ ತಂದೆ ರತನ್ ಸಿಂಗ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಶ್ರೀನಗರದ ರಜೌರಿ ಜಿಲ್ಲೆಯ ಕೆರಿ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಶನಿವಾರ ನಡೆಸಿದ ಗುಂಡಿನ ದಾಳಿಯಲ್ಲಿ ಪರ್ಗತ್ ಸಿಂಗ್ ಸೇರಿದಂತೆ ಮೂವರು ಯೋಧರು ಹಾಗೂ ಸೇನೆಯ ಮೇಜರ್ ಹುತಾತ್ಮರಾಗಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರತನ್ ಸಿಂಗ್ ಅವರು, "ನಮ್ಮ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲೇಬೇಕು. ಆದರೆ ಅದು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಏಕೆ..? ಚಿಕ್ಕ ವಯಸ್ಸಿನಿಂದಲೂ ಪರ್ಗತ್ ಸೇನೆಗೆ ಸೇರಬೇಕೆಂದು ಬಯಸಿದ್ದ. ಅವನು ಹುತಾತ್ಮನಾಗಿರುವುದಕ್ಕೆ ನಮ್ಮ ಕುಟುಂಬ ಹೆಮ್ಮೆ ಪಡುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಪರ್ಗತ್ ಸಿಂಗ್ ಪತ್ನಿ ರಮಣ್ ಪ್ರೀತ್ ಕೌರ್, "ಅವರು ನಿನ್ನೆ ಮನೆಗೆ ಫೋನ್ ಮಾಡಿದ್ದರು. ಆದರೆ ಕರೆ ಅರ್ಧಕ್ಕೇ ತುಂಡಾಯಿತು. ನಂತರ ಅವರ ಸಾವಿನ ಸುದ್ದಿ ನಮ್ಮನ್ನು ತಲುಪಿತು" ಎಂದು ದುಃಖಿಸಿದ್ದಾರೆ. ಅವರಿಗೆ 5 ವರ್ಷದ ಮಗ ಇದ್ದಾನೆ.
ಶನಿವಾರ ನಡೆದ ಕದನ ವಿರಾಮ ಉಲ್ಲಂಘನೆ ಹಸಿರಾಗಿರುವಂತೆಯೇ ಭಾನುವಾವೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸಿದೆ. ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಪಾಕಿಸ್ತಾನಿ ಪಡೆಗಳು ಭಾನುವಾರವೂ ಅಪ್ರಚೋದಿತ ದಾಳಿ ಮುಂದುವರಿಸಿವೆ. ಕಳೆದ ಏಳು ವರ್ಷಗಳಲ್ಲೇ ಈ ಸಲ ಅತಿ ಹೆಚ್ಚು ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos