ದೇಶ

ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನಕರನ್, ಇಪಿಎಸ್-ಒಪಿಎಸ್ ವಿರುದ್ಧ ವಾಗ್ದಾಳಿ

Srinivasamurthy VN
ಚೆನ್ನೈ: ಇನ್ನೆರಡು-ಮೂರು ತಿಂಗಳಲ್ಲೇ ಈಗಿರುವ ನಕಲಿ ಎಐಎಡಿಎಂಕೆ ಪಕ್ಷ ಅಧಿಕಾರ ಕಳೆದುಕೊಳ್ಳಲ್ಲಿದ್ದು, ತಮ್ಮ ನಿಜವಾದ ಎಐಎಡಿಎಂಕೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಉಚ್ಛಾಟಿತ ಎಐಎಡಿಎಂಕೆ ಮುಖಂಡ ಹಾಗೂ ಹಾಲಿ  ಆರ್ ಕೆನಗರ ಶಾಸಕ ಟಿಟಿವಿ ದಿನಕರನ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಆರ್ ಕೆ ನಗರ ಉಪ ಚುನಾವಣೆಯಲ್ಲಿ ಗೆದ್ದ ಬಳಿಕ ಶುಕ್ರವಾರ ಶಾಸಕರಾಗಿ ಟಿಟಿವಿ ದಿನಕರನ್ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಧನಪಾಲ್ ಅವರು ದಿನಕರನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ಪ್ರಮಾಣ ವಚನ ಸ್ವೀಕರ ಬಳಿಕ ಮಾತನಾಡಿದ ದಿನಕರನ್ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರ ವಿರುದ್ಧ ಕಿಡಿಕಾರಿದರು. ಈ ವೇಳೆ, ಪ್ರಸ್ತುತ ಇರುವ ನಕಲಿ ಎಐಎಡಿಎಂಕೆ ಪಕ್ಷದ ಸರ್ಕಾರ   ಬಜೆಟ್ ಮಂಡನೆ ಬಳಿಕ ಅಧಿಕಾರಿಗಳ ಕಳೆದುಕೊಳ್ಳಲಿದೆ. ಆಗ ನಮ್ಮ ನಿಜವಾದ ಎಐಎಡಿಎಂಕೆ ಪಕ್ಷ ಸರ್ಕಾರ ನಡೆಸಲಿದೆ ಎಂದು ಭವಿಷ್ಯ ನುಡಿದರು.
ಪ್ರಸ್ತುತ ಇರುವ ಶಾಸಕರು ತಮ್ಮ ಬೆಂಬಲಕ್ಕೆ ನಿಂತಿದ್ದು, ಹಾಲಿ ಸರ್ಕಾರ ಗರಿಷ್ಛ ಇನ್ನೆರಡು-ಮೂರು ತಿಂಗಳ ಕಾಲ ಮಾತ್ರ ಆಡಳಿತ ನಡೆಸಬಹುದು. ಮಾರ್ಚ್ ನಲ್ಲಿ ನಡೆಯಲಿರುವ ಬಜೆಟ್ ಮಂಡನೆ ಬಳಿಕ ಈ ಜನವಿರೋಧಿ  ಸರ್ಕಾರ ಪತನವಾಗಲಿದೆ. ಬಳಿಕ ತಮ್ಮದೇ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು. ಅಂತೆಯೇ ಆರ್ ಕೆನಗರ ಉಪಚುನಾವಣೆ ತಮ್ಮದೇ ನಿಜವಾದ ಎಐಎಡಿಎಂಕೆ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿದ್ದವರಿಗೆ  ಸರಿಯಾದ ಪಾಠಕಲಿಸಿದೆ. ಆರ್ ಕೆ ನಗರದ ಜನ ಯಾರು ಜಯಲಲಿತಾ ಅವರ ಪ್ರತಿನಿಧಿಗಳು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
SCROLL FOR NEXT