ಕಾನ್ಪುರ: ಉತ್ತರ ಪ್ರದೇಶ ವಿಧಾಸಭೆ ಚುನಾವಣೆಯಲ್ಲಿ ಸ್ಕ್ಯಾಮ್ ಭಾರಿ ಸದ್ದು ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸ್ಕ್ಯಾಮ್ ಆರೋಪಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಇಂದು ಕಾನ್ಪುರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನನ್ನ ಪ್ರಕಾರ ಸ್ಕ್ಯಾಮ್ ಎಂದರ ಧೈರ್ಯ, ಸಾಮರ್ಥ್ಯ, ಮತ್ತು ನಮ್ರತೆ ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬಳಸಿದ 'ಹಗರಣ' ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್ ಅವರು ಸಹ ಸ್ಕ್ಯಾಮ್ ಹೊಸ ಅರ್ಥ ನೀಡಿದ್ದು, ಸ್ಕ್ಯಾಮ್ ಎಂದರೆ ಅಮಿತ್ ಶಾ ಮೋದಿ ಅವರಿಂದ ದೇಶ ಉಳಿಸಿ(Save the Country from Amit Shah and Modi) ಎಂದು ಹೇಳಿದ್ದಾರೆ.
ಇದಕ್ಕು ಮುನ್ನ ಅಲಿಗಢದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಮೋದಿ, ಉತ್ತರ ಪ್ರದೇಶಕ್ಕೆ ಸ್ಕ್ಯಾಮ್ ಬೇಕಿಲ್ಲ. ಮ್ಯಾಜಿಕ್ ಬೇಕು ಎಂದು ಹೇಳಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿ ಬಿಜೆಪಿ 'SCAM' (ಎಸ್ ಫಾರ್ ಸಮಾಜವಾದಿ ಪಕ್ಷ, ಸಿ ಫಾರ್ ಕಾಂಗ್ರೆಸ್, ಎ ಫಾರ್ ಅಖಿಲೇಶ್ ಯಾದವ್ ಹಾಗೂ ಎಂ ಫಾರ್ ಮಾಯಾವತಿ) ವಿರುದ್ಧ ಸ್ಪರ್ಧಿಸುತ್ತಿದೆ ಎಂದಿದ್ದರು.