ನವದೆಹಲಿ: ಶಶಿಕಲಾ ನಟರಾಜನ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವನ ಸ್ವೀಕರಿಸುವುದಕ್ಕೆ ತಡೆ ನೀಡುವಂತೆ ಕೋರಿ ತಮಿಳುನಾಡಿನ ಸಮಾಜಸೇವಾ ಸಂಸ್ಥೆ ಸಟ್ಟಾ ಪಂಚಾಯಿತ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಹಾಗೂ ತಮಿಳುನಾಡಿನ ಭಾವಿ ಸಿಎಂ ಶಶಿಕಲಾ ಅವರ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ನೀಡುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ತೀರ್ಪು ಬರುವವರೆಗೂ ಶಶಿಕಲಾ ಪದಗ್ರಹಣ ಮಾಡುವುದು ಬೇಡ ಎಂದು ಹೇಳಿ ಸಮಾಜಸೇವಾ ಸಂಸ್ಥೆ ಸುಪ್ರೀಂ ಮೆಟ್ಟಿಲೇರಿದೆ.
ಶಶಿಕಲಾ ನಟರಾಜನ್ ಕಳೆದ ಭಾನುವಾರ ತಮಿಳುನಾಡು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಮುಖ್ಯಮಂತ್ರಿಯಾಗಿ ಶಶಿಕಲಾ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.