ಆಗ್ರಾ: ಉತ್ತರ ಪ್ರದೇಶದಲ್ಲಿ ಫೆ.11 ರಿಂದ ನಡೆಯಲಿರುವ ವಿಧಾನಸಭಾ ಚುನಾವಣೆಯ ಗೆಲುವಿನ ಬಗ್ಗೆ ಜ್ಯೋತಿಷಿಗಳು ಭವಿಷ್ಯ ಹೇಳಲು ಪ್ರಾರಂಭಿಸಿದ್ದಾರೆ.
ಒಂದಷ್ಟು ಜ್ಯೋತಿಷಿಗಳು ಸಮಾಜವಾದಿ ಪಕ್ಷ-ಕಾಂಗ್ರೆಸ್ ನ ಮೈತ್ರಿಗೆ ಆಡಳಿತದ ಚುಕ್ಕಾಣಿ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಇನ್ನೂ ಹಲವು ಜ್ಯೋತಿಷಿಗಳು ಇದಕ್ಕೆ ತದ್ವಿರುದ್ಧವಾದ ಭವಿಷ್ಯ ನುಡಿದಿದ್ದಾರೆ.
ಗೌತಮ್ ಎಂಬ ಜ್ಯೋತಿಷಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲುವು ಈ ಬಾರಿ ಬಿಜೆಪಿಗೆ ಸಿಗಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನೂ ನಡೆಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನ್ಮ ಕುಂಡಲಿ ಪ್ರಕಾರ ಪ್ರಸ್ತುತ ಗ್ರಹಸ್ಥಿತಿಗಳು ಉತ್ತಮವಾಗಿದೆ. ನರೇಂದ್ರ ಮೋದಿ ಅವರ ಜನ್ಮ ಕುಂಡಲಿಯಲ್ಲಿ ಗ್ರಹಸ್ಥಿತಿಗಳು ಪ್ರಬಲವಾಗಿರುವುದರಿಂದ ಬಿಜೆಪಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಹುಮತ ಪಡೆಯುವುದು ಖಾತ್ರಿ ಎಂದಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಗೌತಮ್ ಅವರ ಭವಿಷ್ಯ ಕಳೆದ ಮೂರು ಬಾರಿ ನಿಜವಾಗಿರುವುದು ವಿಶೇಷವಾಗಿದೆ. ರಾಹುಲ್ ಗಾಂಧಿ ಅವರ ಪ್ರಭಾವ ಮೈತ್ರಿಕೂಟಕ್ಕೆ ನಕಾರಾತ್ಮಕವಾಗಿ ಪರಿಣಮಿಸಲಿದೆ, ಇನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಸಾಕಷ್ಟು ಅಡಚಣೆಗಳು ಉಂಟಾಗಲಿದ್ದು, ನಂಬಿಕಸ್ಥರೇ ಪಕ್ಷವನ್ನು ತ್ಯಜಿಸುತ್ತಾರೆ ಎಂದು ಗೌತಮ್ ಹೇಳಿದ್ದಾರೆ.