ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಬುಧವಾರ ನಡೆದ ಅಪರೂಪದ ವಿಚಾರಣೆಯೊಂದರಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಅಶ್ಲೀಲ ಪತ್ರಗಳನ್ನು ಬರೆದದ್ದಕ್ಕಾಗಿ ಏಳು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಕೋಲ್ಕತ್ತಾ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿ ಸಿ.ಎಸ್. ಕರ್ನನ್ ಅವರಿಗೆ ನಿಂದನೆ ನೊಟೀಸ್ ಜಾರಿ ಮಾಡಲಾಗಿದೆ.
ಹಾಲಿ ನ್ಯಾಯಾಧೀಶರಿಗೆ ಇದೇ ಮೊದಲ ಬಾರಿಗೆ ನಿಂದನೆ ನೊಟೀಸ್ ಜಾರಿ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಏಳು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕರ್ನನ್ ವಿರುದ್ಧ ಏಕೆ ನಡೆಸಬಾರದೆಂದು ಕೇಳಿದೆ ಮತ್ತು ಫೆಬ್ರವರಿ 13ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಹೇಳಿದೆ.
ಅಲ್ಲದೆ ಎಲ್ಲಾ ನ್ಯಾಯಾಂಗ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಮಾಡದಂತೆ ಮತ್ತು ತಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ರಿಜಿಸ್ಟ್ರಾರ್ ಜನರಲ್ ಅವರಿಗೆ ಹಿಂತಿರುಗಿಸುವಂತೆಯೂ ನ್ಯಾಯಪೀಠ ಹೇಳಿದೆ.