ಲಖನೌ: ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯದಲ್ಲೇ ಅತಿ ಹೆಚ್ಚು ಸ್ಪರ್ಧೆ ನಡೆದರೆ ಅದು ಬಿಜೆಪಿಗೆ ಲಾಭವಾಗಲಿದೆ! ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಸಮೀಕರಣದ ವಿಷಯವಾಗಿ ಇಂತಹದ್ದೊಂದು ವಿಶ್ಲೇಷಣೆ ನಡೆಯುತ್ತಿದೆ.
ಚುನಾವಣಾ ಇತಿಹಾಸವನ್ನು ಕೆದಕಿದರೆ ಮುಸ್ಲಿಂ ಸಮುದಾಯದ ಮತ ವಿಭಜನೆಯಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಅತಿ ಹೆಚ್ಚು ಲಾಭ ಪಡೆದಿರುವ ಪಕ್ಷವಾಗಿ ಬಿಜೆಪಿ ನಿಲ್ಲುತ್ತದೆ. ಈ ಬಾರಿಯ ಉತ್ತರ ಪ್ರದೇಶದ ಚುನಾವಣೆಯಲ್ಲೂ ಇದೇ ರೀತಿ ಆಗಬಹುದೆಂದು ವಿಶ್ಲೇಷಿಸಲಾಗುತ್ತಿದೆ.
ಬಹುಜನ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯಕ್ಕೆ 99 ಟಿಕೆಟ್ ಗಳನ್ನು ನೀಡಿ ಸಮುದಾಯದ ಮತಗಳನ್ನು ಪಡೆಯಲು ಯತ್ನಿಸುತ್ತಿದೆ. ಇತ್ತ ಮೈತ್ರಿಗೆ ಮುಂದಾಗಿರುವ ಕಾಂಗ್ರೆಸ್-ಸಮಾಜವಾದಿ ಪಕ್ಷ ಸಹ ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯಲು ತಂತ್ರ ರೂಪಿಸಿವೆ. ಇನ್ನು ಎಂಐಎಂ ಪಕ್ಷ ಸಹ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
2012 ರ ವಿಧನಾಸಭಾ ಚುನಾವಣೆಯಲ್ಲಿ ಸಮುದಾಯದ ಮತಗಳು ಹಂಚಿಹೋಗಿದ್ದರ ಪರಿಣಾಮವಾಗಿ ಒಟ್ಟಾರೆ ಸ್ಪರ್ಧಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಪೈಕಿ 26 ಅಭ್ಯರ್ಥಿಗಳು ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದರು.
ಸಹರಣ್ ಪುರದ ನಾಕುಡ್ ನಿಂದ ಸ್ಪರ್ಧಿಸಿದ್ದ ಬಿಜೆಪಿ ಧರ್ಮ್ ಸಿಂಗ್ ಸೈನಿ ಗೆಲುವಿಗೆ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಹಾಗೂ ಎಸ್ ಪಿ ಅಭ್ಯರ್ಥಿ ಫಿರೋಜ್ ಅಫ್ತಬ್ ನಡುವಿನ ಮತಗಳ ವಿಭಜನೆ ನೆರವಾಗಿತ್ತು. ಇನ್ನು ಭವನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಸುರೇಶ್ ರಾಣ, ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಿಕಾಂತ್ ವಾಜಪೇಯಿ ಸಹ ಮುಸ್ಲಿಂ ಮತಗಳ ವಿಭಜನೆಯಿಂದಾಗಿ ಗೆದ್ದಿದ್ದರು.