ದೇಶ

ನನ್ನ ಒಪ್ಪಿಗೆಯಿಲ್ಲದೆ ಎಐಎಡಿಎಂಕೆ ಪಕ್ಷಕ್ಕೆ ಹಣ ಬಳಸಲು ಬಿಡಬಾರದು: ಬ್ಯಾಂಕಿಗೆ ಪನ್ನೀರ್ ಸೆಲ್ವಂ ಪತ್ರ

Sumana Upadhyaya
ಚೆನ್ನೈ: ತಾವು ಇನ್ನೂ ಪಕ್ಷದ ಖಜಾಂಚಿಯಾಗಿದ್ದು, ಬ್ಯಾಂಕಿನಲ್ಲಿ ಇಟ್ಟಿರುವ ಪಕ್ಷದ ಹಣವನ್ನು ತಮ್ಮ ಒಪ್ಪಿಗೆಯಿಲ್ಲದೆ ಬಳಸುವಂತಿಲ್ಲ ಎಂದು ವಿ.ಕೆ.ಶಶಿಕಲಾ ಜೊತೆ ರಾಜಕೀಯ ಹೋರಾಟಕ್ಕಿಳಿದಿರುವ ತಮಿಳು ನಾಡು ಉಸ್ತುವಾರಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳಿದ್ದಾರೆ.
ತಮ್ಮನ್ನು ಖಜಾಂಚಿ ಸ್ಥಾನದಿಂದ ತೆಗೆದುಹಾಕಿರುವುದು ಪಕ್ಷದ ನಿಯಮದಡಿ ಕಾನೂನಿಗೆ ವಿರುದ್ಧವಾಗಿದೆ ಎಂದು ಕೂಡ ಕಿಡಿಕಾರಿದ್ದಾರೆ.ಎರಡು ಬ್ಯಾಂಕುಗಳಿಗೆ ಪತ್ರ ಬರೆದಿರುವ ಅವರು, ಎಐಎಡಿಎಂಕೆ ಪಕ್ಷದ ಹೆಸರಿನಲ್ಲಿರುವ ಹಣವನ್ನು ತಮ್ಮ ಅನುಮತಿಯಿಲ್ಲದೆ ಯಾರೂ ತೆಗೆಯಲು ಅವಕಾಶ ನೀಡಬಾರದೆಂದು ಕೋರಿದ್ದಾರೆ.
ಪಕ್ಷದ ಸಂವಿಧಾನದ ಪ್ರಕಾರ, ಕಾನೂನು-20, ಉಪ ಷರತ್ತು 5ರಡಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ನನ್ನನ್ನು ಖಜಾಂಚಿಯಾಗಿ ಮುಂದುವರಿಸಿದ್ದಾರೆ.ಹಾಗಾಗಿ ನನ್ನ ಲಿಖಿತ ಒಪ್ಪಿಗೆ ಮತ್ತು ಸಲಹೆಗಳಿಲ್ಲದೆ ಎಐಎಡಿಎಂಕೆಯ ಚಾಲ್ತಿ ಖಾತೆಯನ್ನು ಯಾರೂ ಕೂಡ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಕರೂರು ವೈಶ್ಯ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸಂಬಂಧಪಟ್ಟ ನಿಯಮ ಪ್ರಕಾರ, ಹೊಸ ಮುಖ್ಯಸ್ಥರು ನೇಮಕಗೊಳ್ಳುವವರೆಗೆ ಎಐಎಡಿಎಂಕೆ ಕಚೇರಿ ಪದಾಧಿಕಾರಿಗಳು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಮೊದಲಾದವರು ಪಕ್ಷದ ಪ್ರಧಾನ ಕಾರ್ಯದರ್ಶಿಯವರಿಂದ ನೇಮಕಗೊಂಡವರು ಹುದ್ದೆಯಲ್ಲಿ ಮುಂದುವರಿಯುತ್ತಾರೆ. 
ನಿಯಮ 20ರಡಿ, ಉಪ ಷರತ್ತು 2ರಡಿಯಲ್ಲಿ ಜಯಲಲಿತಾ ಅವರ ನಿಧನದ ನಂತರ ಪ್ರಧಾನ ಕಾರ್ಯದರ್ಶಿ ಹುದ್ದೆ ಖಾಲಿಯಿದ್ದು, ಶಶಿಕಲಾ ಅವರ ನೇಮಕ ವಿಶೇಷ ಸನ್ನಿವೇಶದಲ್ಲಿ ಆಗಿದೆ. ಅದಕ್ಕೆ ಮಾನ್ಯತೆಯಿಲ್ಲ ಎಂದರು.
ಪಕ್ಷದ ಖಜಾಂಚಿ ಹುದ್ದೆಯಿಂದ ಒಪಿಎಸ್ ಎಂದು ಕರೆಸಿಕೊಳ್ಳುವ ಒ.ಪನ್ನೀರ್ ಸೆಲ್ವಂ ಅವರನ್ನು ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ತೆಗೆದುಹಾಕಿದ್ದರು.
SCROLL FOR NEXT