ದೇಶ

'ವಂದೇ ಮಾತರಂ'ಗೆ ವಿಶೇಷ ಸ್ಥಾನವಿದೆ, ಆದರೆ 'ಜನ ಗಣ ಮನ'ಕ್ಕೆ ಸರಿಸಮಾನವಲ್ಲ: ದೆಹಲಿ ಹೈಕೋರ್ಟ್ ಗೆ ಕೇಂದ್ರ

Sumana Upadhyaya
ನವದೆಹಲಿ:ಭಾರತೀಯರ ಮನಸ್ಸಿನಲ್ಲಿ ವಂದೇ ಮಾತರಂಗೆ ವಿಶೇಷ ಸ್ಥಾನವಿದ್ದು ಅದನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರ ನಾಥ ಠಾಕೂರ್ ಅವರ ರಾಷ್ಟ್ರಗೀತೆ ಜನಗಣ ಮನಕ್ಕೆ ಸಮನಾಗಿ ಪರಿಗಣಿಸಲು  ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದೆ. 
ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸಮಾನ ಗೌರವವನ್ನು ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಗೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ. 
ಪಿಐಎಲ್ ನ್ನು ವಜಾಗೊಳಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವಾಲಯ ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾಯಾಧೀಶ ಸಂಗೀತ ದಿಂಗ್ರಾ ಸೆಹಗಲ್ ಅವರಿದ್ದ ಪೀಠಕ್ಕೆ ಹೇಳಿಕೆ ನೀಡಿ ಇವೆರಡೂ ಗೀತೆಗಳನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತೀಯ ರಾಜ್ಯಗಳ ಅಧಿಕೃತ ಚಿಹ್ನೆಗಳು, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳನ್ನು ಸಮಾನವಾಗಿ ಗೌರವಿಸಿ ಪ್ರೀತಿಸುತ್ತೇವೆ ಇದಕ್ಕೆ ಕ್ರೋಢೀಕರಣದ ಅಗತ್ಯವಿದೆ ಎಂದು ಕೇಂದ್ರ ಉತ್ತರಿಸಿದೆ.
ವಂದೇ ಮಾತರಂಗೆ ಭಾರತೀಯರ ಭಾವನೆ ಮತ್ತು ಮನಸ್ಸಿನಲ್ಲಿ ವಿಶೇಷ ಸ್ಥಾನ ಹೊಂದಿದ್ದು ಅದಕ್ಕೆ ಔಪಚಾರಿಕ ಬೆಂಬಲ ಅಥವಾ ಕ್ರೋಢೀಕರಣದ ಅಗತ್ಯವಿಲ್ಲ ಎಂದು ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ ಹೇಳಿದೆ.
ಭಾರತದ ಶತಕೋಟಿ ಜನರಿಗೆ ರಾಮಚರಿತಮಾನಸ ಮತ್ತು ಮಹಾಭಾರತದ ಮೇಲೆಯೂ ಅತೀವ ಗೌರವ ಇದೆ. ಒಂದು ರಾಷ್ಟ್ರಕ್ಕೆ ಯಾವಾಗಲೂ ಇರುವುದು ಒಂದು ರಾಷ್ಟ್ರಗೀತೆ, ಒಂದು ರಾಷ್ಟ್ರಧ್ವಜ. ಹಾಗೆಂದ ಮಾತ್ರಕ್ಕೆ ಬೇರೆ ಗೀತೆ, ಪ್ರಾರ್ಥನೆಗಳಿಗೆ ಕಡಿಮೆ ಗೌರವವಿದೆ ಎಂದರ್ಥವಲ್ಲ. ಅಥವಾ ನಾಗರಿಕರು ಬೇರೆ ಗೀತೆ, ಹಾಡುಗಳನ್ನು ಗೌರವಿಸಬಾರದು, ಪ್ರೀತಿಸಬಾರದು ಎಂದು ತಡೆಯಲಾಗುತ್ತದೆಯಂದರ್ಥವಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಅಫಿಡವಿಟ್ಟಿನಲ್ಲಿ ವಿವರಿಸಿದೆ.
 ಗೌತಮ್ ಆರ್ ಮೊರರ್ಕ ಎಂಬುವವರು ವಂದೇ ಮಾತರಂಗೆ ಸರಿಯಾದ ಗೌರವ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
SCROLL FOR NEXT