ನವದೆಹಲಿ: ಸೇನೆ ನಡೆಸುವ ಉಗ್ರ ವಿರೋಧಿ ಕಾರ್ಯಾಚರಣೆಗಳಿಗೆ ಅಡ್ಡಿ ಪಡಿಸುವವರಿಗೆ ಭಾರತೀಯ ಸೇನಾ ಮುಖ್ಯಸ್ಥರು ಕಠಿಣ ಸಂದೇಶ ರವಾನೆ ಮಾಡಿದ್ದು, ಕಾರ್ಯಾಚರಣೆಗೆ ಅಡ್ಡಿ ಪಡಿಸುವವರನ್ನೂ ಉಗ್ರರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದಲ್ಲಿ ನಡೆದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಕಾರ್ಯಾಚರಣೆ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವುದರಿಂದ ಭದ್ರತಾ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ನೆರವು ಮಾಡಿಕೊಡುವಂತಹ ಘಟನೆಗಳೂ ನಡೆಯುತ್ತಿವೆ. ಸ್ಥಳೀಯ ಯುವಕರು ಪಾಕಿಸ್ತಾನ, ಐಎಸ್ಐಎಸ್ ಧ್ವಜಗಳನ್ನು ಹಿಡಿದು ಸೇನಾ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಮುಲಾಜಿಲ್ಲದೇ ಅವರನ್ನು ರಾಷ್ಟ್ರದ್ರೋಹಿ, ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
"ಇಂದು ಅಂತಹ ಭಯೋತ್ಪಾದಕರ ಬೆಂಬಲಿಗರು ತಪ್ಪಿಸಿಕೊಳ್ಳಬಹುದು ಆದರೆ ಅವರನ್ನು ಶಾಶ್ವತವಾಗಿ ತಪ್ಪಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ. ಕಾಶ್ಮೀರದಲ್ಲಿ ಭಾರತೀಯ ಸೇನೆಯ ಉಗ್ರ ವಿರೋಧಿ ಕಾರ್ಯಾಚರಣೆ ಮುಂದುವರೆಯಲಿದೆ. ಒಂದು ವೇಳೆ ಸ್ಥಳೀಯ ಯುವಕರು ಉಗ್ರರಿಗೆ ಬೆಂಬಲ ನೀಡುವುದನ್ನು ಮುಂದುವರೆಸಿದರೆ ಸೇನೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಪಿನ್ ರಾವತ್ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.