ದೇಶ

ತಮಿಳುನಾಡು ಬಿಕ್ಕಟ್ಟು: ರಾಜ್ಯಪಾಲರನ್ನು ಭೇಟಿಯಾದ ಪನ್ನೀರ್ ಸೆಲ್ವಂ

Manjula VN

ಚೆನ್ನೈ: ತಮಿಳುನಾಡಿನಲ್ಲಿ ಶನಿವಾರ ನಡೆದ ವಿಶ್ವಾಸ ಮತಯಾಚನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಭಾನುವಾರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ ರಾಜಭವನಕ್ಕೆ ಭೇಟಿ ನೀಡಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಇದೇ ವೇಳೆ ತಮಿಳುನಾಡಿನಲ್ಲಿ ಮತ್ತೊಂದು ಬೆಳವಣಿಗೆ ಕಂಡು ಬಂದಿದ್ದು, ವಿಶ್ವಾಸ ಮತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ ಪಕ್ಷ ಫೆಬ್ರವರಿ 22 ರಂದು ತಮಿಳುನಾಡು ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಕರೆ ನೀಡಿದೆ.

ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಅನುಸರಿಸಿದ ಕ್ರಮ ನಿಯಮ ಬಾಹಿರವಾದುದು ಎಂದು ದೂರಿದ್ದ ಡಿಎಂಕೆ ಮುಖಂಡ ಸ್ಟಾಲಿನ್ ಹಾಗೂ ಪಕ್ಷದ ಕಾರ್ಯಕರ್ತರು ನಿನ್ನೆಯಷ್ಟೇ ಮರೀನಾ ಬೀಚ್ ಬಳಿ ಪ್ರತಿಭಟನೆಗಿಳಿದಿದ್ದರು. ಹಿನ್ನಲೆಯಲ್ಲಿ ಸ್ಟಾಲಿನ್ ಸೇರಿದಂತೆ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿ ನಂತರ ಬಿಡುಗಡೆಗೊಳಿಸಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತಮಿಳುನಾಡು ರಾಜ್ಯ ಪೊಲೀಸರು ಇಂದು ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.

ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಸ್ಟಾಲಿನ್ ಅವರು ಡಿಎಂಕೆ ಪ್ರಧಾನಕಚೇರಿಯಲ್ಲಿ ಪಕ್ಷದ ಎಲ್ಲಾ ಶಾಸಕರನ್ನು ಕರೆದು ವಿಶೇಷ ಸಭೆಯನ್ನು ನಡೆಸುತ್ತಿದ್ದರು. ಈ ವೇಳೆ ಫೆ.22 ರಂದು ರಾಜ್ಯದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ಕರೆ ನೀಡಿದ್ದಾರೆಂದು ತಿಳಿದುಬಂದಿದೆ.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸ್ಟಾಲಿನ್ ಅವರು, ತಿರುಚಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ನಾನೂ ಕೂಡ ಭಾಗಿಯಾಗುತ್ತಿದ್ದೇನೆ. ವಿಶ್ವಾಸಮತ ಸಂಬಂಧ ಪಕ್ಷದ ಶಾಸಕರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಲು ಯತ್ನ ನಡೆಸುತ್ತಿದ್ದಾರೆ. ಭೇಟಿಯಾದ ನಂತರ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ನೀಡುತ್ತೇವೆಂದು ಹೇಳಿದ್ದಾರೆ.

SCROLL FOR NEXT