ಮುಂಬೈ: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನೀಡಿದ ಬೆಂಬಲ ತಾತ್ಕಾಲಿಕವಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭವಿಷ್ಯ ಅತಂತ್ರವಾಗಿದೆ ಎಂದು ಸೋಮವಾರ ಮಿತ್ರ ಪಕ್ಷ ಶಿವಸೇನೆ ಹೇಳಿದೆ.
ಮಹತ್ವದ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಒಂದು ದಿನ ಬಾಕಿ ಇರುವಾಗಲೇ ಮುಖ್ಯಮಂತ್ರಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ದೇವೇಂದ್ರ ಫಡ್ನವಿಸ್ ಅವರು ಮುಂಬೈ ಜನತೆಗೆ ದಿನಕ್ಕೊಂದು ಭರವಸೆ ನೀಡುತ್ತಿದ್ದಾರೆ. ಆದರೆ ಅವರ ಸ್ಥಾನವೇ ಭದ್ರವಾಗಿಲ್ಲ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.
ಮುಂಬೈ ಭವಿಷ್ಯ ಬದಲಿಸಲು ಹೊರಟಿರುವ ಸ್ವತಃ ದೇವೇಂದ್ರ ಫಡ್ನಿವಿಸ್ ಅವರ ಭವಿಷ್ಯವೇ ಅತಂತ್ರವಾಗಿದೆ. ಬಿಜೆಪಿ ಸರ್ಕಾರಕ್ಕೆ ಶಿವಸೇನೆ ನೀಡಿರುವ ಬೆಂಬಲ ತಾತ್ಕಾಲಿಕ ಎಂಬುದನ್ನು ಅವರು ಮರೆಯಬಾರದು ಎಂದು ಎಚ್ಚರಿಸಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ ಫಡ್ನವಿಸ್ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಇಂದು ಅವರು ಮುಂಬೈ ಜನತೆ ಬಳಿ ಮತಕ್ಕಾಗಿ ಬಿಕ್ಷೆ ಬೇಡುವ ಅಗತ್ಯವಿರಲಿಲ್ಲ ಎಂದು ಶಿವಸೇನೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.