ದೇಶ

ವಿಶ್ವವಿಖ್ಯಾತ ಅನಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಗ್ನಿ ಅವಘಡ: ಇಬ್ಬರಿಗೆ ಗಾಯ

Srinivasamurthy VN

ತಿರುವನಂತಪುರ: ಕೇರಳದ ವಿಶ್ವವಿಖ್ಯಾತ ಅನಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದೇವಾಲಯದ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇವಾಲಯದ ಆವರಣದಲ್ಲಿರುವ ದಾಸ್ತಾನು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲೇ ಇದ್ದ ದೇವಾಲಯದ ಕಚೇರಿಗೂ ಬೆಂಕಿ ವ್ಯಾಪಿಸಿದೆ. ಪರಿಣಾಮ ಕಚೇರಿಯಲ್ಲಿದ್ದ ದಾಖಲೆಗಳಿಗೆ ಹಾನಿಯಾಗಿದ್ದು, ಅಗ್ನಿ ಅವಘಡಕ್ಕೆ  ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆಯಾದರೂ ಗೋಡೌನ್ ಪಕ್ಕದಲ್ಲಿದ್ದ ಕಸದ ರಾಶಿಗೂ ಬೆಂಕಿ ತಗುಲಿ ಅದು ಗೋಡೌನ್ ಗೆ ತಗುಲಿರಬಹುದು ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಕೂಡಲೇ  ಐದಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು, ಸತತ 2 ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಯಾಳು ಸಿಬ್ಬಂದಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆ ಸಂಬಂಧ ದೇವಾಲಯದ ಆಡಳಿತ ಮಂಡಳಿ  ತನಿಖೆಗೆ ಆದೇಶಿಸಿದ್ದು, ಅಧಿಕಾರಿಗಳು ಅಗ್ನಿ ಅವಘಡದ ಕುರಿತು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT