ಲಖನೌ: ಉತ್ತರ ಪ್ರದೇಶ ವಿಭಜನೆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪೂರ್ವಾಂಚಲ ಸೇರಿದಂತೆ ನಾಲ್ಕು ಸಣ್ಣ ಸಣ್ಣ ರಾಜ್ಯಗಳನ್ನಾಗಿ ವಿಭಜಿಸಲಾಗುವುದು ಎಂದು ಸೋಮವಾರ ಹೇಳಿದ್ದಾರೆ.
ಇಂದು ಗೋರಖ್ ಪುರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಗೋರಖ್ ಪುರ ಪೂರ್ವ ಉತ್ತರ ಪ್ರದೇಶ ಅಥವ ಪೂರ್ವಾಂಚಲದ ಕೇಂದ್ರವಾಗಿದೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಇದನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದಾರೆ.
'ಯಾವುದೇ ಅಭಿವೃದ್ಧಿ ಹೊಂದದ ನಿಮ್ಮ ಜಿಲ್ಲೆ ಪ್ರತ್ಯೇಕ ರಾಜ್ಯವಾಗುವವರೆಗೆ ಅಭಿವೃದ್ಧಿ ಕಾಣಲ್ಲ. ಬಿಎಸ್ಪಿ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಮಾಯಾವತಿ ಮತದಾರರಿಗೆ ಭರವಸೆ ನೀಡಿದರು. ಅಲ್ಲದೆ ಪೂರ್ವಾಂಚಲ ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ನೀವು ಈ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಕರೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಮಾರ್ಚ್ 4ರಂದು ಆರನೇ ಹಂತದ ಮತದಾನ ನಡೆಯಲಿದೆ.
2011ರಲ್ಲಿ ಮಾಯಾವತಿ ಅವರು ಉತ್ತರ ಪ್ರದೇಶವನ್ನು ಪೂರ್ವಾಂಚ, ಬುಂದೇಲ್ಖಂಡ, ಅವಧ್ ಹಾಗೂ ಪಶ್ಚಿಮ ಉತ್ತರ ಪ್ರದೇಶ ಎಂದು ನಾಲ್ಕು ರಾಜ್ಯಗಳಾಗಿ ವಿಭಜನೆ ಮಾಡುವ ಮಸೂದೆಯನ್ನು ವಿಧಾಸಭೆಯಲ್ಲಿ ಅಂಗೀಕರಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos