ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಎಐಎಡಿಎಂಕೆಯ ವಜಾಗೊಂಡ ಸಂಸದೆ ಸಸಿಕಲಾ ಪುಷ್ಪಾ ಅರ್ಜಿಯನ್ನು ಹಾಕಿದ್ದರು.
ನ್ಯಾಯಮೂರ್ತಿ ಪಿನಕಿ ಚಂದ್ರ ಘೋಸೆ ಮತ್ತು ನ್ಯಾಯಮೂರ್ತಿ ರೊಹಿಂಟೊನ್ ಫಾಲಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ, ಸಸಿಕಲಾ ಪುಷ್ಪಾ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಅರ್ಹತೆಯಿಲ್ಲ ಎಂದು ತಳ್ಳಿ ಹಾಕಿದೆ.
ಪುಷ್ಪ ಪರ ವಕೀಲ ನ್ಯಾಯಾಲಯದಲ್ಲಿ ವಾದ ಮಂಡಿಸಿ ಜಯಲಲಿತಾ ಅವರ ಆರೋಗ್ಯ ಸುಧಾರಿಸುತ್ತಿದೆ, ಚೆನ್ನಾಗಿ ಗುಣಮುಖರಾಗುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ನಂತರ ಹಠಾತ್ತಾಗಿ ಅವರ ನಿಧನದ ಸುದ್ದಿ ಬಂತು ಎಂದು ಹೇಳಿದರು.
ಪುಷ್ಪ ಅವರು ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಚೆನ್ನೈ ಮೂಲದ ಎನ್ ಜಿಒ ತೆಲುಗು ಯುವ ಸಾಕ್ಷಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಜಯಲಲಿತಾ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಕೋರಿತ್ತು.
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಚೆನ್ನೈಯ ಅಪೋಲೋ ಆಸ್ಪತ್ರೆಗೆ ಸೆಪ್ಟೆಂಬರ್ 22ರಂದು ದಾಖಲಾಗಿದ್ದ ಜಯಲಲಿತಾ ಡಿಸೆಂಬರ್ 5ರಂದು ನಿಧನರಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos