ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಸಮಾಜವಾದಿ ಪಕ್ಷದ ಬಿಕ್ಕಟ್ಟು ಮುಂದುವರೆದಿರುವಂತೆಯೇ ಕೇಂದ್ರ ಚುನಾವಣಾ ಆಯೋಗ ಅಖಿಲೇಶ್ ಹಾಗೂ ಮುಲಾಯಂ ಸಿಂಗ್ ಯಾದವ್ ಬಣಗಳಿಗೆ ಜನವರಿ 17ರ ಗಡುವು ನೀಡಿದ್ದು, ಬಹುಮತ ಸಾಬೀತು ಪಡಿಸಿ ಚಿನ್ಹೆ ಪಡೆಯುವಂತೆ ಸೂಚನೆ ನೀಡಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನಡುವೆ ಪಕ್ಷದ ಚಿನ್ಹೆಗಾಗಿ ಹಗ್ಗಜಗ್ಗಾಟ ಮುಂದುವರೆದಿದ್ದು, ಈ ಹಿಂದೆ ದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದ ಮುಲಾಯಂ ಸಿಂಗ್ ಯಾದವ್ ಅವರು, 25 ವರ್ಷಗಳ ಹಿಂದೆ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದಾಗ ಪಡೆದುಕೊಳ್ಳಲಾಗಿದ್ದ ‘ಸೈಕಲ್’ ಚಿಹ್ನೆಯ ಪ್ರತಿಪಾದನೆ ಸಲುವಾಗಿ ದೆಹಲಿಯಲ್ಲಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದ್ದಾರೆ. ಅಂತೆಯೇ ಅಖಿಲೇಶ್ ಯಾದವ್ ಅವರು ತಾವೇ ಪಕ್ಷದ ಮುಖ್ಯಸ್ಥ ಹಾಗೂ ಸೈಕಲ್ ಚಿಹ್ನೆ ತಮಗೆ ಸೇರಿದ್ದು, ತಮಗೆ 200-229ಕ್ಕೂ ಹೆಚ್ಚು ಮಂದಿ ಎಸ್ಪಿ ಶಾಸಕರ ಬೆಂಬಲ ತಮಗಿದೆ. ಹೀಗಾಗಿ ತಮಗೇ ಚಿನ್ಹೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಉಭಯ ಬಣಗಳ ವಾದ-ಪ್ರತಿವಾದವನ್ನು ಆಲಿಸಿರುವ ಕೇಂದ್ರ ಚುನಾವಣಾ ಆಯೋಗ ಬಹುಮತ ಸಾಬೀತುಪಡಿಸಿದರೆ ಮಾತ್ರ ಅವರಿಗೆ ಚಿಹ್ನೆ ಲಭ್ಯವಾಗಲಿದೆ ಎಂದು ಹೇಳಿದೆ. ಅದರಂತೆ ಉಭಯ ಬಣಗಳಿಗೆ ಜನವರಿ 17ರ ಗಡುವು ನೀಡಿದ್ದ ಅಷ್ಟರೊಳಗೆ ಬಹುಮತ ಸಾಬೀತುಪಡಿಸಲು ವಿಫಲವಾದರೆ ಸೈಕಲ್ ಚಿಹ್ನೆಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಜನವರಿ 17ರವರೆಗೆ ಆಯೋಗ ಸಮಯಾವಕಾಶ ನೀಡಿದ್ದು, ಆ ಅವಧಿಯೊಳಗೆ ಬಹುಮತ ಸಾಬೀತುಪಡಿಸಲು ಉಭಯ ಬಣಗಳು ವಿಫಲವಾದರೆ ಸೈಕಲ್ ಚಿಹ್ನೆಯನ್ನು ಆಯೋಗ ಹಿಂಪಡೆಯಲಿದೆ. ಉಭಯ ಬಣಗಳು ಏಕರೀತಿಯ ಬಹುಮತ ಹೊಂದಿದ್ದರೆ ಚುನಾವಣಾ ಆಯೋಗದ ಅಧಿಕಾರಿಗಳು ರ್ಚಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಅಂತಹ ಸಂದರ್ಭದಲ್ಲಿ ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುವುದು ಕೂಡಾ ಆಯೋಗದ ಮುಂದಿರುವ ಆಯ್ಕೆಗಳಲ್ಲಿ ಒಂದು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಆಯೋಗ ಚಿನ್ಹೆಯನ್ನು ವಶಪಡಿಸಿಕೊಂಡಿದ್ದೇ ಆದರೆ ಉಭಯ ಬಣಗಳು ಸೈಕಲ್ ಚಿನ್ಹೆಯಿಂದ ವಂಚಿತವಾಗಲಿವೆ.
ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿರುವಂತೆ ಒಂದು ವೇಳೆ ಎಸ್ ಪಿ ಪಕ್ಷ ಸೈಕಲ್ ಗುರುತು ಪಡೆಯುವಲ್ಲಿ ವಿಫಲವಾದರೆ ಮತನಷ್ಟವಾಗುವ ಜತೆಗೆ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆಯೂ ಎದುರಾಗುವುದರಿಂದ ಮುಲಾಯಂ ಮತ್ತು ಅಖಿಲೇಶ್ ಇಬ್ಬರೂ ಸೈಕಲ್ಗಾಗಿ ಸತತ ಪ್ರಯತ್ನ ನಡೆಸುತ್ತಿವೆ. ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಉಭಯ ಪಕ್ಷಗಳು ಕೂಡಾ ದಾಖಲೆ ಮತ್ತು ಶಾಸಕರ ಬೆಂಬಲ, ಬಹುಮತ ಸಾಬೀತಿಗೆ ತಯಾರಿ ನಡೆಸಿವೆ ಎಂದು ಹೇಳಿದ್ದಾರೆ.