ನವದೆಹಲಿ: ಕ್ಯಾಮರಾದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮತ್ತಿಬ್ಬರು ಹದಿಹರೆಯದ ಬಾಲಕರು ಜೀವ ಕಳೆದುಕೊಂಡಿದ್ದಾರೆ. ದೆಹಲಿಯ ಅಕ್ಷರಧಾಮ ದೇವಸ್ಥಾನದ ಹತ್ತಿರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕರು ಬಾಗಿಲ ಬಳಿ ನಿಂತು ಸ್ಟಂಟ್ ಮಾಡುತ್ತಾ ಸೆಲ್ಫಿಗೆ ಫೋಸ್ ನೀಡುತ್ತಿದ್ದ ವೇಳೆ ಇನ್ನೊಂದು ರೈಲಿಗೆ ತಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಪೂರ್ವ ದೆಹಲಿಯ ಪಾಂಡವ ನಗರ ಪ್ರದೇಶದಲ್ಲಿ ಹತ್ತನೇ ತರಗತಿಯ ಯಶ್ ಮತ್ತು 9ನೇ ತರಗತಿಯ ಸುಭಮ್ ಎಂಬ ಬಾಲಕರು ಮೃತಪಟ್ಟವರು. ಇವರು ತಮ್ಮ ಐವರು ಸ್ನೇಹಿತರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ದೆಹಲಿಯ ಮಯೂರ್ ವಿಹಾರ್ ನಲ್ಲಿರುವ ಆಸ್ಟರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.
ಇವರೆಲ್ಲರೂ 1,300 ರೂಪಾಯಿಗೆ ಡಿಎಸ್ಎಲ್ಆರ್ ಕ್ಯಾಮೆರಾ ಬಾಡಿಗೆಗೆ ಪಡೆದು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಮೊದಲು ಖೆಲ್ಗೌನ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಹುಡುಗರು ನಂತರ ಅಕ್ಷರಧಾಮ ದೇವಸ್ಥಾನದ ಹಿಂದಿನ ರೈಲ್ವೆ ಟ್ರಾಕ್ ಗೆ ಹೋದರು. ಫೋಟೋ ಕ್ಲಿಕ್ಕಿಸುತ್ತಾ ಫೇಸ್ ಬುಕ್ ಗೆ ಅಪ್ ಲೋಡ್ ಮಾಡುತ್ತಿದ್ದರು.
ಪೊಲೀಸರು ಕ್ಯಾಮರಾವನ್ನು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.