ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ನವದೆಹಲಿ: ರಾಷ್ಟ್ರೀಯ ತತ್ವಗಳು, ಮೌಲ್ಯಗಳು ಹಾಗೂ ಸಂಸ್ಕೃತಿಗಳ ವಿರುದ್ಧ ಮಾತನಾಡುವವರು ಹಾಗೂ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಇತರರ ಮೇಲೆ ಹೇರುವವರನ್ನು ದೂರವಿಡಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಡೆಸಲಾಗುತ್ತಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಚರ್ಚೆ ವೇಳೆ ಪಿಡಿಪಿ ಸಚಿವ ಇಮ್ರಾನ್ ಅನ್ಸಾರಿಯವರು ನ್ಯಾಷನಲ್ ಕಾನ್ಫರೆನ್ಸ್ ನ ಶಾಸಕ ದೇವೇಂದರ್ ರಾಣಾಗೆ ಮನಸ್ಸು ಮಾಡಿದರೆ ಇಲ್ಲೇ ನಿನ್ನ ಹತ್ಯೆ ಮಾಡಬಲ್ಲೆ ಬೆದರಿಕೆ ಹಾಕಿದ್ದರು.
ವಿಧಾನಸಭೆಯಲ್ಲಿ ಶಾಸಕರೊಬ್ಬರಿಗೆ ಸಚಿವರು ಈ ರೀತಿಯಲ್ಲಿ ಬೆದರಿಕೆ ಹಾಕಿರುವುದಕ್ಕೆ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿವೆ.
ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಪ್ರಸಾರ ಭಾರತಿ ಸ್ಥಳೀಯ ಸುದ್ದಿ ಕೇಂದ್ರದಲ್ಲಿ ನಡೆಸಲಾಗುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಸಚಿವನ ಬೆದರಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಪ್ರಸಾದ್ ಮುಖರ್ಜಿಯವರು ದೇಶದ ಒಗ್ಗಟ್ಟಿಗಾಗಿ ಹೋರಾಟ ಮಾಡಿದ್ದರು. ಜಮ್ಮ ಮತ್ತು ಕಾಶ್ಮೀರದ ಏಕೀಕರಣಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು. ರಾಷ್ಟ್ರೀಯ ಏಕೀಕರಣ ಕುರಿತಂತೆ ಇಂತಹವರಿಂದ ನಾವು ಸ್ಫೂರ್ತಿ ಪಡೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ತತ್ತ್ವಗಳು, ಮೌಲ್ಯಗಳು, ಸಂಸ್ಕೃತಿಗಳ ವಿರುದ್ಧ ಮಾತನಾಡುವುದು ಹಾಗೂ ತಮ್ಮ ಅಭಿಪ್ರಾಯಗಳನ್ನು ಇತರರ ಮೇಲೆ ಹೇರುವುದನ್ನು ಒಪ್ಪಲು ಸಾಧ್ಯವಿಲ್ಲ. ಭಾರತ ಸ್ವತಂತ್ರ ರಾಷ್ಟ್ರ. ದೇಶದಲ್ಲಿರುವ ಪ್ರತೀಯೊಬ್ಬರಿಗೂ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಕೆಲವು ಸಂವಿಧಾನದ ನಿಯಂತ್ರಣವನ್ನು ತಪ್ಪುತ್ತಿದ್ದಾರೆ. ಇತರರ ಸ್ವತಂತ್ರವನ್ನು ಕಿತ್ತಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಭಾಷೆ, ಸಂಸ್ಕೃತಿ, ಆಹಾರ ಆಯ್ಕೆಗಳನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ.
ಇತರರ ಮೇಲೆ ದೌರ್ಜನ್ಯ, ಹಲ್ಲೆ ನಡೆಸಿ ತಾನೊಬ್ಬ ದೊಡ್ಡ ವ್ಯಕ್ತಿ ಎಂದು ಹೇಳಿಕೊಳ್ಳುವಂತಿಲ್ಲ. ಕೆಲ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇಂತಹ ಹೇಳಿಕೆಗಳನ್ನು ನಾವು ತಿರಸ್ಕರಿಸಬೇಕು ಹಾಗೂ ಖಂಡಿಸಬೇಕು. ಇಂತಹವುಗಳಿಗೆ ನಾವು ಪ್ರಾಮುಖ್ಯತೆಯನ್ನು ನೀಡಬಾರದು. ಇದರಿಂದ ದೇಶ ಹಾಗೂ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos