ನವದೆಹಲಿ: ಅಮರನಾಥ ಗುಹೆ ದೇವಾಲಯಕ್ಕೆ ಯಾತ್ರೆ ಹೊರಟಿರುವ ಯಾತ್ರಿಕರು ಅಸ್ತಿತ್ವದಲ್ಲಿರುವ ಸುರಕ್ಷತಾ ಶಿಷ್ಟಾಚಾರ ಮತ್ತು ಆಡಳಿತದೊಂದಿಗೆ ಸಹಕರಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ಯಾತ್ರಿಕರಿಗೆ ಮನವಿ ಮಾಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು, ಜಮ್ಮು-ಕಾಶ್ಮೀರ ಸರ್ಕಾರ ಮತ್ತು ಕೇಂದ್ರ ಭದ್ರತಾ ಪಡೆ ಯಾತ್ರಿಕರ ಭದ್ರತೆ ಮತ್ತು ಸುರಕ್ಷತೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಬಸ್ಸಿನಲ್ಲಿನ ಯಾತ್ರಿಕರ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿ ಯಾತ್ರಿಕರು ಹತರಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಸ್ಸು ದೇವಳದ ಮಂಡಳಿಯಲ್ಲಿ ದಾಖಲಾಗಿಲ್ಲ. ಬಸ್ಸಿಗೆ ಯಾವುದೇ ಭದ್ರತೆಗಳಿರಲಿಲ್ಲ. ಘಟನೆಯ ತನಿಖೆ ನಡೆಸುತ್ತಿರುವ ಆಡಳಿತ ಅಧಿಕಾರಿಗಳು ಅಂತಿಮ ವರದಿ ನೀಡಿದ ನಂತರ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ನಾಯ್ಡು ಹೇಳಿದರು.
ಮೊದಲೇ ಮಾಹಿತಿ ಮತ್ತು ಸುರಕ್ಷತೆಯ ಶಿಷ್ಟಾಚಾರವನ್ನು ಅನುಸರಿಸುವುದರಿಂದ ಯಾತ್ರಿಕರು ಸುರಕ್ಷಿತವಾಗಿರಬಹುದೆಂದು ಮತ್ತು ಇದಕ್ಕೆ ಯಾತ್ರಿಕರು ಸಹಕರಿಸಬಹುದೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಯಾತ್ರಿಕರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಖಂಡಿಸಿದ್ದಾರೆ.