ನವದೆಹಲಿ: ಭ್ರಾತೃತ್ವ ಬೆಳೆಸುವ ಉದ್ದೇಶದಿಂದ ದೇಶಾದ್ಯಂತ ‘ರಕ್ಷಾಬಂಧನ ಅಭಿಯಾನ’ ನಡೆಸುವುದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಸ್ಲಿಂ ಘಟಕ ಮಂಗಳವಾರ ಹೇಳಿದೆ.
ಆಗಸ್ಟ್ 3ರಿಂದ ರಾಖಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು, ಮುಸ್ಲಿಂ ಯುವತಿಯರು ಹಿಂದೂ ಯುವಕರಿಗೆ ರಾಖಿ ಕಟ್ಟಲಿದ್ದಾರೆ. ಹಾಗೆಯೇ ಹಿಂದೂ ಯುವತಿಯರು ಮುಸ್ಲಿಂ ಯುವಕರಿಗೆ ರಾಖಿ ಕಟ್ಟಿ ಶುಭಕೋರಲಿದ್ದಾರೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್ಎಂ) ವಕ್ತಾರ ಮೊಹಮ್ಮದ್ ಅಫ್ಜಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆಗಸ್ಟ್ 3ರಂದು ಜೈಪುರದಲ್ಲಿ, ಆಗಸ್ಟ್ 5 ಮತ್ತು 6ರಂದು ದೆಹಲಿ, ಲಖನೌದಲ್ಲಿ ರಾಖಿ ಅಭಿಯಾನದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ ದೇಶದ 12 ರಾಜ್ಯಗಳಲ್ಲಿ ಈ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದು, ಹಿಂದು ಮತ್ತು ಮುಸ್ಲಿಮರಲ್ಲಿ ಭ್ರಾತೃತ್ವ ಬೆಳೆಸುವುದು ಹಾಗೂ ಉಭಯ ಧರ್ಮೀಯರು ಎರಡೂ ಧರ್ಮದವರ ರಕ್ಷಣೆ ಮಾಡುವುದಾಗಿ ಕಂಕಣ ತೊಡುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅಫ್ಜಲ್ ಹೇಳಿದ್ದಾರೆ.