ಕಮ್ಮಂ: ತೀವ್ರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ತೆಲಂಗಾಣದಲ್ಲಿ ನಡೆದಿದೆ.
ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಇಂದು ಬೆಳಗಿನ ಜಾವ ಕಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ನಾಯಕಂಗುಡೆಮ್ ನ ಪಲೇರು ಜಲಾಶಯಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಲಾಶಯದಿಂದ ಐವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಆತ್ಮಹತ್ಯೆಗೆ ಶರಣಾದವರು ಕುಸುಮಂಚಿ ಮಂಡಲದ ಜೀಲ್ಲಚೆರುವು ಗ್ರಾಮದ ನಿವಾಸಿಗಳಾಗಿದ್ದಾರೆ.
ಮೃತರನ್ನು ಶೈಕ್ ಪೆಂಟೂ ಸಾಹೇಬ್(50), ಆತನ ಪತ್ನಿ ಶೈಕ್ ಮೆಹಬೂಬಾ ಬೀ(45), ಅವರ ಮಗ ಶೈಕ್ ಸಲೀಮ್(32) ಸೋಸೆ ರಜಿಯಾಶ್ರ(28) ಹಾಗೂ ಮೊಮ್ಮಕ್ಕಳಾದ ಸೋನಿ(8) ಮತ್ತು ನಸ್ರೀನ್(4) ಎಂದು ಗುರುತಿಸಲಾಗಿದೆ.
ಆತ್ಮಹತ್ಯೆಗೆ ಶರಣಾದ ಕುಟುಂಬ ಭೂ ವ್ಯವಹಾರದಲ್ಲಿ ಕೆಲವು ವ್ಯಕ್ತಿಗಳಿಂದ ಮೋಸ ಹೋಗಿತ್ತು. ಇದರಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಕುಟುಂಬ ಸದಸ್ಯ ಶೇಕ್ ಲಾಲೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ. ಆದರೆ ಭಯಗೊಂಡು ಕೊನೆ ಗಳಿಗೆಯಲ್ಲಿ ವಾಪಸ್ ಬಂದು ಗ್ರಾಮದವರಿಗೆ ಸುದ್ದಿ ತಿಳಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಗ್ರಾಮಸ್ಥರು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos