ದೇಶ

ರೈಲ್ವೆ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ: ಅಸ್ವಸ್ಥಗೊಂಡ ಪ್ರಯಾಣಿಕ!

Manjula VN
ನವದೆಹಲಿ: ರೈಲು ಪ್ರಯಾಣಿಕರಿಗೆ ನೀಡುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾದುದ್ಲ್ಲ ಎಂದು ಸಿಎಜಿ ವರದಿ ನೀಡಿದ ಬೆನ್ನಲ್ಲೇ ಇದಕ್ಕೆ ಉದಾಹರಣೆಯೆಂಬಂತೆ ಉತ್ತರಪ್ರದೇಶದಲ್ಲೊಂದು ಘಟನೆ ನಡೆಸಿದೆ. ರೈಲ್ವೆ ಪ್ರಯಾಣಿಕನೋರ್ವನಿಗೆ ನೀಡಿದ್ದ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. 
ಹೌರಾ-ದೆಹಲಿ ಪ್ರಯಾಣದ ಪೂರ್ವ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೋರ್ವನಿಗೆ ನೀಡಲಾಗಿದ್ದ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವುದಾಗಿ ವರದಿಗಳಾಗಿವೆ. 
ಬಿರಿಯಾನಿ ತಿಂದ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕ ಅಸ್ವಸ್ಥಗೊಂಡಿದ್ದು, ಅಸ್ವಸ್ಥಗೊಂಡ ಪ್ರಯಾಣಿಕನಿಗೆ ನಾಲ್ಕು ಗಂಟೆಗಳ ಬಳಿಕ ಚಿಕಿತ್ಸೆ ನೀಡಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ನಂತರ ಸಹ ಪ್ರಯಾಣಿಕರು ಆಹಾರ ಪೊಟ್ಟಣದ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ದೂರು ನೀಡಿದ್ದಾರೆ. 
ವಿಷಾಹಾರ ಸೇವಿಸಿ ಗಂಟೆಗಳು ಕಳೆದರೂ ನನಗೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಿಲ್ಲ. ಇದು ನಿಜಕ್ಕೂ ತೀವ್ರ ಬೇಸರವನ್ನು ತಂದಿದೆ. ನಾಲ್ಕು ಗಂಟೆಗಳ ಬಳಿಕ ನನಗೆ ಚಿಕಿತ್ಸೆ ನೀಡಲಾಗಿತ್ತು. ಎಂದು ಅಸ್ವಸ್ಥಗೊಂಡ ಪ್ರಯಾಣಿಕ ಹೇಳಿಕೊಂಡಿದ್ದಾರೆ. 
ಘಟನೆಗೆ ದಾನಾಪುರ್ ವಿಭಾಗದ ರೈಲು ವ್ಯವಸ್ಥಾಪಕ ಕಿಶೋರ್ ಕುಮಾರ್ ಅವರು ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 
ಘಟನೆ ನಿಜಕ್ಕೂ ದುರಾದೃಷ್ಟಕರ. ಪ್ರಕರಣ ಸಂಬಂಧ ತನಿಖೆ ನಡೆಸಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಸ್ವಸ್ಥಗೊಂಡ ಪ್ರಯಾಣಿಕನಿಗೆ ಈಗಾಗಲೇ ಪರೀಕ್ಷೆ ನಡೆಸಿ, ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪ್ರಯಾಣಿಕರ ಆರೋಗ್ಯ ಅತ್ಯಂತ ಮುಖ್ಯವಾದದ್ದು. ರೈಲಿನ ಎಲ್ಲಾ ಪ್ರಯಾಣಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ,
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಿಗುವ ಆಹಾರಗಳು ಮನುಷ್ಯನ ಸೇವನೆಗೆ ಅಯೋಗ್ಯವಾಗಿದ್ದು, ಗುಣಮಟ್ಟದಲ್ಲಿ ಅತ್ಯಂತ ಕಳಪೆಯಾಗಿದೆ ಎಂದು ಜು.21ರಂದು ಸಿಎಜಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಹೇಳಿತ್ತು. ಇದಕ್ಕೆ ಜನಾಕ್ರೋಶಗಳೂ ಕೂಡ ವ್ಯಕ್ತವಾಗಿದ್ದವು. 
ರೈಲ್ವೆ ಕಳಪೆ ಗುಣಮಟ್ಟದ ಆಹಾರ: ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಆರ್'ಜೆಡಿ
ರೈಲ್ವೆ ಕಳಪೆ ಗುಣಮಟ್ಟದ ಆಹಾರದ ಕುರಿತಂತೆ ಸಿಎಜಿ ವರದಿ ಸಲ್ಲಿಸಿದ ಬೆನ್ನಲ್ಲೇ ಪ್ರಯಾಣಿಕನೋರ್ವನಿಗೆ ನೀಡಲಾಗಿದ್ದ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಸರ್ಕಾರದ ವಿರುದ್ದ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ತೀವ್ರವಾಗಿ ಕಿಡಿಕಾರಲು ಆರಂಭಿಸಿವೆ. 
ರೈಲ್ವೆ ಕಳಪೆ ಗುಣಮಟ್ಟದ ಆಹಾರ ಹಿನ್ನಲೆಯಲ್ಲಿ ಕೂಡಲೇ ಈ ವಿಚಾರದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕೆಂದು ಕೋರಿ ಲೋಕಸಭೆಯಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ ಜೈ ಪ್ರಕಾಶ್ ನಾರಾಯಣ್ ಅವರು, ನಿಲುವಳಿ ಸೂಚನೆ ಮಂಡಿಸಿದರು.
SCROLL FOR NEXT