ನವದೆಹಲಿ: ವಂದೇ ಮಾತರಂ ಗೀತೆಯನ್ನು ಹಾಡುವುದು ಹಾಗೂ ಹಾಡದಿರುವುದು ಅವರವರ ಆಯ್ಕೆಗೆ ಬಿಟ್ಟ ವಿಚಾರವಾಗಿದ್ದು, ವಂದೇ ಮಾತರಂ ಹಾಡಲು ನಿರಾಕರಿಸಿದವರು ದೇಶದ್ರೋಹಿಗಳಾಗುವುದಿಲ್ಲ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯವರು ಹೇಳಿದ್ದಾರೆ.
ವಂದೇ ಮಾತರಂ ವಿವಾದ ಕುರಿತಂತೆ ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿರುವ ಅವರು, ವಂದೇ ಮಾತರಂ ಹಾಡುವುದು ವ್ಯಕ್ತಿಯ ಆಯ್ಕೆಗೆ ಬಿಟ್ಟ ವಿಚಾರ. ಹಾಡಲು ಇಚ್ಛಿಸುವವರು ಹಾಡಬಹುದು. ಹಾಡಲು ಇಚ್ಛಿಸದವರು ದೇಶದ್ರೋಹಿಗಳಾಗುವುದಿಲ್ಲ ಎಂದು ಹೇಳಿದ್ದಾರೆ.
ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚನೆಯ ವಂದೇ ಮಾತರಂ ದೇಶಭಕ್ತಿ ಗೀತೆಯನ್ನು ಉದ್ದೇಶಪೂರ್ವಕವಾಗಿ ವಿರೋಧಿಸಿದರೆ ಆತನ ಕೀಳು ಅಭಿರುಚಿಯನ್ನು ತೋರಿಸುತ್ತದೆಯೇ ಹೊರತು, ದೇಶದ ಹಿತಾಸಕ್ತಿಯನ್ನಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲೂ ಅದನ್ನು ಕಡ್ಡಾಯಗೊಳಿಸುವಂತೆ ಬಿಜೆಪಿ ಶಾಸಕ ರಾಜಪುರೋಹಿತ್ ಅವರು ಈ ಹಿಂದೆ ಆಗ್ರಹಿಸಿದ್ದರು. ಮಹಾರಾಷ್ಟ್ರ ವಿಧಾನಭವನದಲ್ಲಿ ಎಐಎಂಐಎಂ ಶಾಸಕ ವಾರೀಸ್ ಪಠಾಣ್ ಮತ್ತು ಸಮಾಜವಾದಿ ಪಕ್ಷದ ಮುಖಮಂಡ ಅಬು ಅಜ್ಮಿಯವರು ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಲೋಕೋಪಯೋಗಿ ಸಚಿವಚ ಚಂದ್ರಕಾಂತ್ ಪಾಟೀಲ್ ಅವರು, ಭಾರತದಲ್ಲಿರಬೇಕೆಂದರೆ ವಂದೇ ಮಾತರಂ ಹಾಡಲೇಬೇಕೆಂದು ಹೇಳಿದ್ದರು.