ನವದೆಹಲಿ: ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಚೀನಾ ಗಡಿ ಆಕ್ರಮಣ ಮಾಡಿದೆ ಎಂದು ತಜ್ಞರು ಹೇಳಿದ್ದಾರೆ.
ಜುಲೈ ತಿಂಗಳಲ್ಲಿ ಚೀನಾ ಭಾರತದ ಗಡಿಯೊಳಗೆ ಪ್ರವೇಶಿಸಿದ ಘಟನೆಗಳು ನಡೆದಿದ್ದು, ಇದಕ್ಕೂ ಮುನ್ನ ಡೊಕ್ಲಾಮ್ ಪ್ರದೇಶದಲ್ಲಿ ಚೀನಾ-ಭಾರತ ಸೇನಾ ಪಡೆ ನಡುವೆ ತಳ್ಳಾಟ ನಡೆದಿತ್ತು. ಈ ಬಗ್ಗೆ ರಕ್ಷಣಾ ತಜ್ಞರು ವಿಶ್ಲೇಷಣೆ ನೀಡಿದ್ದು, ಪಾಕಿಸ್ತಾನ ಬಿಕ್ಕಟ್ಟಿನ ಸ್ಥಿತಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಲು ಚೀನ ಭಾರತದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಎಎನ್ಐ ನೊಂದಿಗೆ ಮಾತನಾಡಿರುವ ರಕ್ಷಣಾ ತಜ್ಞ ಕಮಲ್ ಚಿನಾಯ್, ಪಾಕಿಸ್ತಾನಕ್ಕೆ ಸಂಬಂಧಿಸಿದ ಭಾರತದ ಹಲವು ನೀತಿಗಳನ್ನು ಕೈಬಿಡುವಂತೆ ಮಾಡಲು ಚೀನಾ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದು ಗಡಿಯಲ್ಲಿನ ಆಕ್ರಮಣ ಇದರ ಒಂದು ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
1962 ರಿಂದ ಈ ವರೆಗೂ ಭಾರತದ ಮೇಲೆ ಚೀನಾ ಒತ್ತಡ ಹೇರಲು ಯತ್ನಿಸುತ್ತಿದ್ದು, ಉತ್ತರಾಖಂಡ್ ಗೆ ಪ್ರವೇಶಿಸಿ ಕಲ್ಲುಗಳ ಮೇಲೆ ಚೀನಾ ಎಂದು ಬರೆಯುವುದಕ್ಕೆ ಚೀನಾ ಸೇನೆ ಪ್ರಸಿದ್ಧಿ ಪಡೆದಿದೆ ಎಂದು ಮತ್ತೋರ್ವ ರಕ್ಷಣಾ ತಜ್ಞ ಪಿಕೆ ಸೆಹ್ಗಲ್ ಹೇಳಿದ್ದಾರೆ.