ಲಂಡನ್: ಭಾರತೀಯ ಬ್ಯಾಂಕ್ ಗಳಇಗೆ ರೂ.9000 ಕೋಟಿ ಪಂಗನಾಮ ಹಾಕಿ ಇಂಗ್ಲೆಂಡಿನಲ್ಲಿರುವ ಸಾಲದ ದೊರೆ ವಿಜಯ್ ಮಲ್ಯ ಅವರು, ತಮ್ಮ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ. ಕೆಲವರು ಶತಕೋಟಿ ಪೌಂಡ್ ಗಳ ಕನಸು ಕಾಣುತ್ತಿದ್ದಾರೆಂದು ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಲಂಡನ್ ನಲ್ಲಿ ವಾಸ್ತವ ಹೂಡಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಭಾರತ ಸರ್ಕಾರ ದಾಖಲಿಸಿರುವ ಗಡಿಪಾರು ಪ್ರಕರಣ ಸಂಬಂಧ ಮಲ್ಯ ನ್ಯಾಯಾಲಯದಿಂದ ನಿನ್ನೆಯಷ್ಟೇ ಜಾಮೀನು ಪಡೆದುಕೊಂಡಿದ್ದಾರೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಮಲ್ಯಗೆ ಡಿ.4ರವರೆಗೆ ಜಾಮೀನು ನೀಡಿದ್ದು, ಕೋರ್ಟ್ ಮುಂದಿನ ವಿಚಾರಣೆಯನ್ನು ಜು.16ಕ್ಕೆ ಮುಂದೂಡಿದೆ.
ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿರುವ ಮಲ್ಯ, ನೀವು ಕೋಟಿಗಟ್ಟಲೆ ಹಣದ ಬಗ್ಗೆ ಕನಸು ಕಾಣುತ್ತಲೇ ಇರಿ ಎಂದು ಮಾಧ್ಯಮಗಳ ಕುರಿತು ಅಣಕವಾಡಿದ್ದಾರೆ.
ನನ್ನ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ನಾನು ನಿರಾಕರಿಸಿದ್ದೇನೆ. ನಾನು ನ್ಯಾಯಾಲಯದ ವಿಚಾರಣೆಯಿಂದ ಜಾರಿಕೊಳ್ಳುತ್ತಿಲ್ಲ. ನನ್ನ ಪ್ರಕರಣ ಸಾಬೀತು ಪಡಿಸಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಕೋಟಿಗಟ್ಟಲೆ ಹಣದ ಕುರಿತು ನೀವು ಕನಸು ಕಾಣುತ್ತಲೇ ಇರಿ. ಕಿರಿಕಿರಿಯಾಗುವ ಪ್ರಶ್ನೆಗಳನ್ನು ಕೇಳಬೇಡಿ ಎಂದು ಸಿಡಿಮಿಡಿಯಿಂದ ಉತ್ತರ ನೀಡಿದ್ದಾರೆ.
ಇದೇ ವೇಳೆ ಓವಲ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು ತಮ್ಮನ್ನು ಕಳ್ಳ...ಕಳ್ಳ...ಎಂದು ಕೂಗಿದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ನಾನು ಭಾರತದ ತಂಡವನ್ನು ಬೆಂಬಲಿಸಲು ಮೈದಾನಕ್ಕೆ ಹೋಗಿದ್ದೆ. ಹಲವರು ನನಗೆ ಶುಭಾಶಯಗಳನ್ನು ಕೋರಿದರು. ಆದನ್ನು ಬಿಟ್ಟು, ಇಬ್ಬರು ಕುಡುಕರು ನನ್ನ ವಿರುದ್ಧ ಘೋಷಣೆ ಕೂಗಿದ್ದನ್ನೇ ದೊಡ್ಡದಾಗಿ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.